ಸಾವಿನಲ್ಲೂ ಸಾರ್ಥಕತೆ: ನಾಲ್ವರಿಗೆ ಜೀವದಾನ ಮಾಡಿದ ಯುವಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮೆದುಳು ನಿಷ್ಕ್ರಿಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಯುವಕನೊಬ್ಬ ತನ್ನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ತನ್ನ ಅಂಗಾಂಗಗಳನ್ನು 4 ಜನರಿಗೆ ನೀಡಿ ಇಬ್ಬರು ದೃಷ್ಟಿ ವಿಕಲ ಚೇತನರ ಬಾಳಿಗೆ ದೃಷ್ಟಿಯ ಬೆಳಕು ನೀಡಿ ಮಾನವೀಯತೆ ಮೆರೆದಿದ್ದಾನೆ.

ಧಾರವಾಡದ ಎಸ್ಡಿಎಂ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನ ಹೃದಯ ಹಾಗೂ ಕಿಡ್ನಿಯನ್ನು ಗ್ರೀನ್ ಕಾರಿಡಾರ್ ಮೂಲಕ ಧಾರವಾಡದಿಂದ ತೆಗೆದುಕೊಂಡು ಬಂದು ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಕಸಿ ಮಾಡಲಾಗಿದೆ. ಒಂದು ಕಿಡ್ನಿಯನ್ನು ಎಸ್ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ಕಸಿ ಮಾಡಲಾಗಿದೆ ಹಾಗೂ ಲೀವರ್ ಅನ್ನು ಬೆಂಗಳೂರಿನ ಆಸ್ಪತ್ರೆಗೆ ವಾಯುಮಾರ್ಗದ ಮೂಲಕ ಕಳುಹಿಸಿಕೊಡಲಾಗಿದೆ. ಪೊಲೀಸರೂ ಕೂಡ ಜೀರೋ ಟ್ರಾಫಿಕ್ ಮೂಲಕ ಅಂಗಾಂಗಗಳನ್ನು ಸ್ಥಳಾಂತರಿಸಲು ಅವಕಾಶ ಕಲ್ಪಿಸಿಕೊಟ್ಟು ಇನ್ನೊಂದು ಜೀವಕ್ಕೆ ನೆರವಾಗಿದ್ದಾರೆ.

ಯುವಕನ ಹೃದಯವನ್ನು ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗೋಕಾಕ ತಾಲೂಕಿನ 50 ವರ್ಷದ ವ್ಯಕ್ತಿಗೆ ಕಸಿ ಮಾಡಲಾಗಿದ್ದು ಡಾ.ರಿಚರ್ಡ್ ಸಾಲ್ಡಾನಾ, ಡಾ. ಮೋಹನ ಗಾನ, ಡಾ.ಆನಂದ ವಾಘರಾಳಿ ಮತ್ತು ಅವರ ತಂಡ ಹಾಗೂ ಡಾ.ಎಸ್.ಐ. ನೀಲಿ, ಡಾ.ಮಲ್ಲಿಕಾರ್ಜುನ ಕರಿಶೆಟ್ಟಿ(ಖಾನಪೇಟ) ಅವರ ತಂಡ ಅಂಗಾಂಗ ಕಸಿ ಮಾಡುವಲ್ಲಿ ಶ್ರಮ ವಹಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!