ಹೊಸದಿಗಂತ ವರದಿ, ಸೋಮವಾರಪೇಟೆ:
ಅಕ್ರಮವಾಗಿ ಬೀಟೆ ಮರವನ್ನು ಕಡಿದು ನಾಟಾಗಳಾಗಿ ಪರಿವರ್ತಿಸಿ ಸಾಗಾಟಕ್ಕೆ ಯತ್ನಿಸುತ್ತಿದ್ದ ಆರೋಪದಡಿ ಮೂವರನ್ನು ಬಂಧಿಸಲಾಗಿದೆ.
ಆರೋಪಿಗಳನ್ನು ಮೋರಿಕಲ್ಲು ಬಸವನಹಳ್ಳಿಯ ಅಜಿತ (34) ಕಲ್ಕಂದೂರಿನ ಕೆ.ಎಂ. ನಿಖಿಲ್ (28), ದೊಡ್ಡಬ್ಬೂರಿನ ಎ.ಟಿ.ಸೋಮಶೇಖರ್(27) ಎಂದು ಗುರುತಿಸಲಾಗಿದ್ದು, ಈ ಪೈಕಿ ಅಜಿತ್ ಹಾಗೂ ನಿಖಿಲ್ ಎಂಬವರನ್ನು ಸ್ಥಳದಲ್ಲೇ ಬಂಧಿಸಲಾಗಿದೆ.
ಆರೋಪಿಗಳಿಂದ ಬೀಟೆ ಮರದ 5 ನಾಟಾಗಳು, ಒಂದು ಟಿಪ್ಪರ್ (KA -12 B-6891)ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಬಾಣಾವರ ಶಾಖೆ ವ್ಯಾಪ್ತಿಯ ದೊಡ್ಡಬ್ಬೂರು ಗ್ರಾಮದ ನಿವಾಸಿ ಸೋಮಶೇಖರ್ ಎಂಬವರಿಗೆ ಸೇರಿದ ಜಾಗದಲ್ಲಿ ಒಂದು ಒಣಗಿ ನಿಂತಿದ್ದ ಬೀಟೆ ಮರವನ್ನು ಅಕ್ರಮವಾಗಿ ಕಡಿತಲೆ ಮಾಡಿ ನಾಟಾಗಳಾಗಿ ಪರಿವರ್ತಿಸಿ ಟಿಪ್ಪರ್ ಲಾರಿಗೆ ತುಂಬಿಸುತ್ತಿರುವಾಗ ವಲಯ ಅರಣ್ಯಾಧಿಕಾರಿ ಹೆಚ.ಪಿ.ಚೇತನ್ ಅವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಹೆಚ್.ಎಂ. ರಾಕೇಶ್, ಅರಣ್ಯ ರಕ್ಷಕರಾದ ಸದಾನಂದ ಹಿಪ್ಪರಗಿ, ಪ್ರಸಾದ್ ಕುಮಾರ್, ಪ್ರಕಾಶ್ ಅರಣ್ಯ ವೀಕ್ಷಕರಾದ ಅಂತೋಣಿ ಕೆ.ಎ., ವಿಕಾಸ್ ಕಾರ್ಯಾಚರಣೆ ನಡೆಸಿದರು.
ಇಬ್ಬರು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ಇನ್ನೋರ್ವ ಆರೋಪಿ ಸೋಮಶೇಖರ್ ತಲೆ ಮರೆಸಿಕೊಂಡಿರುವುದಾಗಿ ಹೇಳಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ