ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್ಗಢದ ರಾಯ್ಪುರದಲ್ಲಿ ಶನಿವಾರ ಗೃಹ ಸಚಿವ ಅಮಿತ್ ಶಾ ಎನ್ಐಎ ಕಚೇರಿಯನ್ನ ಉದ್ಘಾಟಿಸಿದರು . ಈ ವೇಳೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಸರ್ಕಾರವು ರಾಷ್ಟ್ರೀಯ ತನಿಖಾ ದಳ(ಎನ್ಐಎ)ದಂತಹ ತನಿಖಾ ಸಂಸ್ಥೆಗಳ ಬಲವನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಮೋದಿ ಸರ್ಕಾರವು ಉಗ್ರರು, ಎಡಪಂಥೀಯ ಉಗ್ರವಾದಿಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಪಾಲಿಸುತ್ತಿದೆ. ಉಗ್ರ ನಿಗ್ರಹ ಕಾನೂನುಗಳನ್ನೂ ಬಲ ಪಡಿಸಿದೆ.ಜಮ್ಮು ಮತ್ತು ಕಾಶ್ಮೀರವನ್ನು ಉಗ್ರ ಮುಕ್ತ ಮಾಡಲು ಸತತ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು. ನಾವು ಎನ್ಐಎಯಂತಹ ತನಿಖಾ ಸಂಸ್ಥೆಗಳ ಬಲವರ್ಧಿಸಿದ್ದೇವೆ. ಪ್ರತಿ ರಾಜ್ಯದಲ್ಲೂ ಎನ್ಐಎ ಶಾಖೆ ತೆರೆಯಲಿದ್ದೇವೆ ಎಂದೂ ಶಾ ಹೇಳಿದ್ದಾರೆ.
ಭಯೋತ್ಪಾದನೆಯನ್ನು ಬೆಂಬಲಿಸುವ ಚಟುವಟಿಕೆಗಳಿಗೆ ವಿರುದ್ಧವಾಗಿರುವ ಕಾನೂನುಗಳನ್ನ ಬಲಪಡಿಸಬೇಕಾಗಿದೆ ಮತ್ತು ಶೇಕಡಾ 100ರಷ್ಟು ಶಿಕ್ಷೆಯ ಪ್ರಮಾಣವನ್ನ ಸಾಧಿಸುವ ಗುರಿಯನ್ನ ನಿಗದಿಪಡಿಸಬೇಕಾಗಿದೆ ಎಂದು ಶಾ ಹೇಳಿದರು.
ಎನ್ಐಎ ತನ್ನನ್ನು ತಾನು ವಿಶ್ವದ ‘ಪ್ರಮುಖ ಭಯೋತ್ಪಾದನಾ ವಿರೋಧಿ ಸಂಸ್ಥೆ’ ಎಂದು ಸ್ಥಾಪಿಸಿಕೊಂಡಿರುವುದಕ್ಕೆ ಗೃಹ ಸಚಿವರು ಶ್ಲಾಘಿಸಿದರು, ಜೊತೆಗೆ 100% ಶಿಕ್ಷೆಯ ಪ್ರಮಾಣವನ್ನು ಸಾಧಿಸುವ ಗುರಿಯನ್ನು ಸಹ ನಿಗದಿಪಡಿಸಿದರು – ಇದು ಪ್ರಸ್ತುತ 94.23% ರಷ್ಟಿದೆ.
ಮೋದಿ ಪ್ರಧಾನಿಯಾದ ನಂತ್ರ, ದೇಶದಲ್ಲಿ ಭಾರಿ ಬದಲಾವಣೆ ಕಂಡುಬಂದಿದೆ ಎಂದು ಜನರು ನನಗೆ ಹೇಳಿದ್ದಾರೆ. ಅನೇಕ ಕಾರಣಗಳಿರಬಹುದು. ಆದ್ರೆ, ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಕೋಟ್ಯಂತರ ಬಡವರು ಈ ರಾಷ್ಟ್ರದಲ್ಲಿ ತಮಗೆ ಅಸ್ತಿತ್ವವಿದೆ ಎಂದು ಭಾವಿಸಿದರು ಎಂದು ಇಂದು ರಾಯ್ಪುರದಲ್ಲಿ ನಡೆದ ವಿಚಾರ ಸಂಕಿರಣವನ್ನುದ್ದೇಶಿಸಿ ಮಾತನಾಡುತ್ತಾ ಶಾ ಹೇಳಿದರು.