ಹೊಸದಿಗಂತ ವರದಿ, ವಿಜಯಪುರ:
ರಾಷ್ಟ್ರಹೋರಾಟಗಾರ ವೀರ ಸಾವರ್ಕರ್ ಗೆ ಅಪಮಾನ ಮಾಡುತ್ತಿರುವುದು ಸರಿಯಲ್ಲ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರ ಪುರುಷರಿಗೆ ಅಪಮಾನ ಮಾಡಿದರೆ ಭಾರತೀಯರಿಗೆ ಸಹಿಸಿಕೊಳ್ಳಲು ಆಗಲ್ಲ ಎಂದರು. ವೀರ ಸಾವರ್ಕರ್ ಫೋಟೊ ಮುಸ್ಲಿಂ ಏರಿಯಾದಲ್ಲಿ ಹಾಕಬಾರದು ಎಂದು ಹೇಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಅವರು ಕಿಡಿಕಾರಿದರು. ನಾವು ಎಲ್ಲ ಗಣೇಶ ಉತ್ಸವದಲ್ಲಿ ವೀರ ಸಾವರ್ಕರ್ ಫೋಟೊ ಹಾಕುತ್ತೇವೆ. ಗಣೇಶ ಮೂರ್ತಿ ಜೊತೆಗೆ ಸಾವರ್ಕರ್ ಫೋಟೊ ಇಡುವ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರ ಭಕ್ತರಿಗೆ ಅವಮಾನ ಮಾಡುವವರಿಗೆ ಸಮಾಜದ ತರುಣರು ಉತ್ತರ ನೀಡಬೇಕು ಎಂದರು.
ಪಠ್ಯಪುಸ್ತಕದಲ್ಲಿ ಪ್ರಕಟವಾಗಿರುವುದು ಸಾವರ್ಕರ್ ಕುರಿತಾದ ಕಾವ್ಯಾತ್ಮಕ ವರ್ಣನೆ. 12 ವರ್ಷಗಳ ಕಾಲ ಕಾಲಾಪಾನಿಯಂತಹ ಕಠೋರ ಶಿಕ್ಷೆಗೆ ಒಳಗಾಗಿ ಜೈಲಿನಲ್ಲಿದ್ದಾಗ ಅವರನ್ನು ದೇಶ ಕನಸು ಮನಸ್ಸಿನಲ್ಲೂ ಕಾಡುತ್ತಿತ್ತು. ಪಕ್ಷಿಗಳನ್ನು ಉಪಮೆಯನ್ನಾಗಿರಿಸಿಕೊಂಡು ದೇಶವನ್ನು ತಮ್ಮದೇ ಆದ ಶೈಲಿಯಲ್ಲಿ ವರ್ಣಿಸಿದ್ದರು. ಅವರ ಕೃತಿಯಲ್ಲಿರುವ ಕಾವ್ಯಾತ್ಮಕ ವಿಚಾರವನ್ನು ಪುಸ್ತಕದಲ್ಲಿ ತಿಳಿಸಲಾಗಿದೆ. ಅದನ್ನು ಅರ್ಥ ಮಾಡಿಕೊಳ್ಳುವ ವಿಶಾಲ ಮನಸ್ಸು ಎಲ್ಲರಿಗೂ ಇರಬೇಕು ಎಂದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ