ಹೊಸದಿಗಂತ ಡಿಜಿಟಲ್ ಡೆಸ್ಕ್
ಮಂಗಳೂರಿನ ಹೊರವಲಯದ ತೊಕ್ಕೊಟ್ಟು ಜಂಕ್ಷನ್ನಲ್ಲಿ ಭಾನುವಾರ ಬಸ್ಸಿನ ಬ್ರೇಕ್ ಫೇಲ್ ಆಗಿ ಕ್ಸೈಲೋ ಕಾರಿಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ.
ಬಸ್ ಚಾಲಕನ ಸಮಯ ಪ್ರಜ್ಞೆಯಿಂದ 21 ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಮಂಗಳೂರಿನಿಂದ ಮುಡಿಪು ಕಡೆಗೆ ತೆರಳುತ್ತಿದ್ದ ಎನ್.ಎಸ್ ಟ್ರಾವೆಲ್ಸ್ ಬಸ್ಸು ತೊಕ್ಕೊಟ್ಟು ಬಸ್ ನಿಲ್ದಾಣಕ್ಕೆ ಹೋಗಬೇಕಾಗಿತ್ತು. ಆದರೆ ಬ್ರೇಕ್ ಫೇಲ್ ಆದ ಕಾರಣ ನೇರ ತೊಕ್ಕೊಟ್ಟು ಜಂಕ್ಷನ್ಗೆ ಬಸ್ಸನ್ನು ಚಲಾಯಿಸಿದ್ದು, ಈ ವೇಳೆ ಉಳ್ಳಾಲದಿಂದ ಮುಡಿಪುವಿನತ್ತ ತೆರಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.
ಕಾರಿನಲ್ಲಿದ್ದ ಮುಡಿಪು ನಿವಾಸಿ ಮೊಹಮ್ಮದ್ ಮತ್ತು ಅವರ ಸಂಬಂಧಿ ಪ್ರಯಾಣಿಕ ಅಪಾಯವಿಲ್ಲದೆ ಪಾರಾಗಿದ್ದಾರೆ. ಘಟನೆಯ ಪರಿಣಾಮ ಕಾರಿನ ಒಂದು ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.
ಜೆಪ್ಪು ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.