ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್ ನ ದಿಯೋಘರ್ ವಿಮಾನ ನಿಲ್ದಾಣದಲ್ಲಿ ತಮ್ಮ ಚಾರ್ಟರ್ಡ್ ಫ್ಲೈಟ್ ಅನ್ನು ರಾತ್ರಿ ಟೇಕ್ಆಫ್ಗೆ ತೆರವುಗೊಳಿಸುವಂತೆ ಒತ್ತಾಯಿಸಿದ್ದಕ್ಕಾಗಿ ಬಿಜೆಪಿ ಸಂಸದರಾದ ನಿಶಿಕಾಂತ್ ದುಬೆ, ಮನೋಜ್ ತಿವಾರಿ ಮತ್ತು ಇತರ ಏಳು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ವಿಮಾನ ನಿಲ್ದಾಣದ ಡಿಎಸ್ಪಿ ಸುಮನ್ ಅನನ್ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ನಿಶಿಕಾಂತ್ ದುಬೆ, ಮನೋಜ್ ತಿವಾರಿ ಮತ್ತು ವಿಮಾನ ನಿಲ್ದಾಣದ ನಿರ್ದೇಶಕರು ಸೇರಿದಂತೆ ಒಂಬತ್ತು ಜನರ ಮೇಲೆ ಇತರರ ಜೀವ ಅಥವಾ ಸುರಕ್ಷತೆಗೆ ಅಪಾಯ ಒಡ್ಡಿದ ಮತ್ತು ಕ್ರಿಮಿನಲ್ ಅತಿಕ್ರಮಣದ ಆರೋಪ ಹೊರಿಸಲಾಗಿದೆ.
ಎಫ್ಐಆರ್ ಪ್ರಕಾರ, ಆಗಸ್ಟ್ 31 ರಂದು ದಿಯೋಘರ್ ವಿಮಾನ ನಿಲ್ದಾಣದಲ್ಲಿ ಗೊಡ್ಡಾದ ಲೋಕಸಭಾ ಸಂಸದ ನಿಶಿಕಾಂತ್ ದುಬೆ, ಅವರ ಮಗ ಕನಿಷ್ಕ್ ಕಾಂತ್ ದುಬೆ, ಮಹಿಕಾಂತ್ ದುಬೆ, ಸಂಸದ ಮನೋಜ್ ತಿವಾರಿ, ಮುಖೇಶ್ ಪಾಠಕ್, ದೇವತಾ ಪಾಂಡೆ ಮತ್ತು ಪಿಂಟು ತಿವಾರಿ ಅವರು ಅನುಮತಿಯಿಲ್ಲದೆ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಪ್ರವೇಶಿಸಿ ತಮ್ಮ ಪ್ರಭಾವವನ್ನು ಬಳಸಿ ತಮ್ಮ ಚಾರ್ಟರ್ಡ್ ವಿಮಾನಕ್ಕೆ ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಒತ್ತಡ ಹೇರಿದರು ಎನ್ನಲಾಗಿದೆ.
ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿರುವ ದಿಯೋಘರ್ ವಿಮಾನ ನಿಲ್ದಾಣದಲ್ಲಿ ರಾತ್ರಿ ಕಾರ್ಯಾಚರಣೆಯನ್ನು ಇನ್ನೂ ಪ್ರಾರಂಭಿಸಲಾಗಿಲ್ಲ. ವಿಮಾನ ಸೇವೆಗಳನ್ನು ಪ್ರಸ್ತುತ ಸೂರ್ಯಾಸ್ತದ 30 ನಿಮಿಷಗಳ ಮೊದಲು ಅನುಮತಿಸಲಾಗಿದೆ. ಘಟನೆಯ ದಿನ ಸೂರ್ಯಾಸ್ತದ ಸಮಯ ಸಂಜೆ 6:03 ಆಗಿತ್ತು. ಬಿಜೆಪಿ ನಾಯಕರ ಚಾರ್ಟರ್ಡ್ ಫ್ಲೈಟ್ ಸಂಜೆ 6:17ಕ್ಕೆ ಟೇಕಾಫ್ ಆಗಿತ್ತು. ಈಹಿನ್ನೆಲೆಯಲ್ಲಿ ನಿಲ್ದಾಣದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ದೂರು ನೀಡಲಾಗಿದೆ.