ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪ್ರಾಪ್ತ ವಯಸ್ಕ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರಿಗೆ ಜಾಮೀನು ನಿರಾಕರಿಸಲಾಗಿದ್ದು, ಶ್ರೀ ಸದ್ಯಕ್ಕೆ ಮತ್ತೆ ಪೊಲೀಸ್ ಕಸ್ಟಡಿಯಲ್ಲೇ ಇರಬೇಕಾಗಿದೆ.
ಮುರುಘಾ ಶರಣರ ಪರ ವಕೀಲರು ಶನಿವಾರ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ, ಸೋಮವಾರವರೆಗೂ ಯಾವುದೇ ಅರ್ಜಿ ಸಲ್ಲಿಸಬೇಡಿ, ಪೋಲಿಸ್ ಕಸ್ಟಡಿ ಮುಗಿಯುವವರೆಗೂ ಜಾಮೀನು ನೀಡುವುದಿಲ್ಲ ಎಂದು ಆರೋಪಿ ಪರ ವಕೀಲರಿಗೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಶ್ರೀಗಳನ್ನು ಮತ್ತೆ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಆರೋಗ್ಯ ತಪಾಸಣೆಗಾಗಿ ಕರೆತರಲಾಗಿದೆ. ಶುಕ್ರವಾರ ಬೆಳಗ್ಗೆ ೯ ಗಂಟೆಯಿಂದ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಶ್ರೀ ಗಳಿಗೆ ವಿವಿಧ ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು. ಬಳಿಕ ರಾತ್ರಿ ವಿಚಾರಣೆಗೆ ಡಿವೈಎಸ್ಪಿ ಕಚೇರಿಗೆ ಕರೆದೊಯ್ದಿದ್ದರು. ಇಂದು ಮತ್ತೆ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು ಆರೋಗ್ಯದಲ್ಲಿ ಏರು ಪೇರು ಕಂಡ ಬಂದ ಹಿನ್ನೆಲೆಯಲ್ಲಿ ಮತ್ತೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಸ್ಪತ್ರೆಯ ಸುತ್ತಮುತ್ತ ಭದ್ರತೆ ಒದಗಿಸಲಾಗಿದೆ.