ಹೊಸದಿಗಂತ ಡಿಜಿಟಲ್ ಡೆಸ್ಕ್
ಅರ್ಷದೀಪ್ ಸಿಂಗ್ ಹೆಸರು ಪ್ರಸ್ತುತ ಭಾರತೀಯ ಕ್ರಿಕೆಟ್ ಸುತ್ತ ಸುತ್ತುತ್ತಿರುವ ಎಲ್ಲಾ ಚರ್ಚೆಗಳ ಕೇಂದ್ರಬಿಂದುವಾಗಿದೆ. ಭಾನುವಾರ ಟೀಂ ಇಂಡಿಯಾ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೋಲುಂಡಿತ್ತು. ಈ ಪಂದ್ಯದಲ್ಲಿ ಅರ್ಷದೀಪ್ ಕ್ಯಾಚ್ ಬಿಟ್ಟಿದ್ದರಿಂದ ʼಮ್ಯಾಚ್ʼ ಭಾರತದ ಕೈಬಿಟ್ಟಿತ್ತು. ಈ ಘಟನೆ ಭಾರತದ ಯುವ ವೇಗಿಯನ್ನು ಟ್ರೋಲರ್ ಗಳ ʼರೇಡಾರ್ʼ ಅಡಿಯಲ್ಲಿ ತಂದಿತ್ತು. ಪಾಕಿಸ್ತಾನಕ್ಕೆ ಕೊನೆಯ 15 ಎಸೆತಗಳಲ್ಲಿ 31 ರನ್ ಅಗತ್ಯವಿದ್ದಾಗ ರವಿ ಬಿಷ್ಣೋಯ್ ಬೌಲಿಂಗ್ನಲ್ಲಿ ಅರ್ಷದೀಪ್ ಈಸಿ ಕ್ಯಾಚ್ ಕೈಚೆಲ್ಲಿ ಆಸಿಫ್ ಅಲಿಗೆ ಜೀವದಾನ ನೀಡಿದ್ದರು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಪಾಕ್ ಪಂದ್ಯವನ್ನು ಕೈವಶ ಮಾಡಿಕೊಂಡಿತ್ತು.
ಅರ್ಷದೀಪ್ ಕ್ಯಾಚ್ ಹಿಡಿದಿದ್ದರೆ, ಬಹುತೇಕ ಭಾರತಕ್ಕೆ ಸತತ ಮೂರನೇ ಜಯವಾಗುತ್ತಿತ್ತು. ಕ್ಯಾಚ್ ಕೈಚೆಲ್ಲಿದ್ದಕ್ಕೆ ಸೋಷಿಯಲ್ ಮಿಡಿಯಾದಲ್ಲಿ ವ್ಯಾಪಕ್ ಟ್ರೋಲ್ ಮಾಡಲಾಗಿತ್ತು. ಅರ್ಶದೀಪ್ರನ್ನು ಪಂದ್ಯದ ವಿಲನ್ ಎಂದು ಬಿಂಬಿಸಲಾಗಿತ್ತು. ಅವರ ವಿಕಿಪೀಡಿಯಾ ಪುಟದಲ್ಲಿ ತಪ್ಪು ಮಾಹಿಯನ್ನು ಹಂಚಲಾಗಿತ್ತು.
ತಮ್ಮ ಮಗ ದೇಶಕ್ಕಾಗಿ ಆಡುತ್ತಿರುವುದನ್ನು ಅರ್ಷದೀಪ್ ಪೋಷಕರು ಮೊದಲ ಬಾರಿಗೆ ಕ್ರೀಡಾಂಗಣಕ್ಕೆ ಬಂದಿದ್ದರು. ಇಡೀ ಘಟನೆಯು ಅರ್ಷದೀಪ್ ಅವರ ಪೋಷಕರನ್ನು ನಿರಾಶೆಗೊಳಿಸಿತು.
ಈ ವಿಚಾರವಾಗಿ ಇಂಡಿಯನ್ ಎಕ್ಸ್ಪ್ರೆಸ್ನೊಂದಿಗೆ ಮಾತನಾಡಿರುವ ಅರ್ಷದೀಪ್ ತಂದೆ ದರ್ಶನ್ ಸಿಂಗ್, “ಪೋಷಕರಾಗಿ, ಇದು ನಿಜವಾಗಿಯೂ ಕೆಟ್ಟದಾಗಿದೆ. ಆದರೆ ಅರ್ಶದೀಪ್ ವಯಸ್ಸು ಕೇವಲ 23. ನಾನು ಟ್ರೋಲರ್ ಗಳ ಬಗ್ಗೆ ಹೆಚ್ಚು ಹೇಳಲು ಬಯಸುವುದಿಲ್ಲ. ಎಲ್ಲರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಅಭಿಮಾನಿಗಳಿಲ್ಲದೆ ಆಟವಿಲ್ಲ. ಆಟದ ಹಂತದಲ್ಲಿ ಇಂತಹ ತಪ್ಪುಗಳು ಘಟಿಸುತ್ತವೆ. ಏನೇ ಮಾಡಿದರೂ ಆಟಗಾರನ ಬೆಂಬಲಕ್ಕೆ ನಿಲ್ಲುವವರು ಅಭಿಮಾನಿಗಳು. ಒಂದು ಆಟದಲ್ಲಿ ಒಂದು ತಂಡ ಮಾತ್ರವೇ ಗೆಲ್ಲಬಹುದು. ಈ ತಪ್ಪು ಅರ್ಷದೀಪ್ ಗೆ ಪಾಠವಾಗಲಿದೆ ಎಂದಿದ್ದಾರೆ.
ಚಂಡೀಗಢಕ್ಕೆ ಹಿಂತಿರುಗುವ ಮೊದಲು ಮಗನೊಂದಿಗೆ ಮಾತನಾಡಿದ್ದೇನೆ. ಅರ್ಶ್ದೀಪ್ ಈ ಘಟನೆಯನ್ನು ಮುಂಬರುವ ಸವಾಲುಗಳಿಗೆ ಪ್ರೇರೇಪಿಸುವ ಪಾಠವಾಗಿ ತೆಗೆದುಕೊಂಡಿದ್ದೇನೆ ಎಂದಿದ್ದಾನೆ. ‘ನನ್ನ ಬಗ್ಗೆ ಹರಿದಾಡುತ್ತಿರುವ ಎಲ್ಲಾ ಟ್ವೀಟ್ಗಳು ಮತ್ತು ಸಂದೇಶಗಳನ್ನು ನೋಡಿ ನಾನು ನಗುತ್ತಿದ್ದೇನೆ. ನಾನು ಅದರಿಂದ ಸಕಾರಾತ್ಮಕ ಅಂಶಗಳನ್ನು ಮಾತ್ರ ತೆಗೆದುಕೊಳ್ಳುತ್ತೇನೆ. ಈ ಘಟನೆ ನನ್ನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ’ ಎಂದು ಅರ್ಷದೀಪ್ ಹೇಳಿದ ಎಂದು ದರ್ಶನ್ ಸಿಂಗ್ ಹೇಳಿದ್ದಾರೆ.
ʼಇಡೀ ಭಾರತ ತಂಡವು ನನ್ನನ್ನು ಬೆಂಬಲಿಸುತ್ತಿದೆ ಎಂದು ಅವನು ಹೇಳಿದʼ ಎಂದು ತಾಯಿ ಬಲ್ಜೀತ್ ಹೇಳಿದ್ದಾರೆ. ಭಾರತದ ಗೆಲುವಿಗೆ ಕೊಡುಗೆ ನೀಡಲು ಎದುರು ನೋಡುತ್ತಿದ್ದೇನೆ ಎಂದು ಅರ್ಶ್ದೀಪ್ ನಮಗೆ ತಿಳಿಸಿದ್ದಾನೆ ಎಂದು ದರ್ಶನ್ ಹೇಳಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ