ಹೊಸ ದಿಗಂತ ವರದಿ, ಗದಗ:
ಇತ್ತೀಚಿಗೆ ಸುರಿದ ಮಳೆಯಿಂದ ತಾಲ್ಲೂಕಿನ ನಾಗಾವಿ ಗ್ರಾಮದಲ್ಲಿ ರಾಜ್ಯದಲ್ಲಿಯೇ ದಿನವೊಂದಕ್ಕೆ ದಾಖಲೆಯ ಪ್ರಮಾಣದ ಮಳೆಯಾಗಿರುವದರಿಂದ ಈ ದಾಖಲೆಯ ಮಳೆಯಿಂದ ನಾಗಾವಿ- ಬೆಳದಡಿ ಮುಖ್ಯ ರಸ್ತೆಯು ಕೊಚ್ಚಿಕೊಂಡು ಹೋಗಿ ಸಂಪರ್ಕ ಕಳೆದುಕೊಂಡು ಸುಮಾರು 40 ಅಡಿ ಗುಂಡಿ ಬಿದ್ದಿರುವುದು ಮಳೆಯ ಭಯಾನಕತೆಯನ್ನು ತೋರಿಸುತ್ತಿದೆ.
ಈ ಮಳೆಯಿಂದ ಶಿರುಂದ, ಎಲಿಶಿರುಂದ, ಬೆಳದಡಿ, ಬೆಳದಡಿ ತಾಂಡಾ, ಹರ್ತಿ ಹದ್ದು, ನಾಗಾವಿ, ನಾಗಾವಿ ತಾಂಡಾದ ರೈತರ ಜಮೀನುಗಳಿಂದ ಹರಿದು ಬರುತ್ತಿರುವ ನೀರಿನಿಂದ ಬೆಳೆಗಳು ಮಳೆನೀರಿನಿಂದ ಕೊಚ್ಚಿ ಹೋಗಿದೆ. ನಾಗಾವಿ ಸುತ್ತಮುತ್ತಲಿನ ಸುಮಾರು 5 ಸಾವಿರ ಎಕರೆ ಪ್ರದೇಶದಲ್ಲಿ ರೈತರು ಬೆಳೆದ ಬೆಳೆಗಳು ನಾಶವಾಗಿದ್ದು ಅಲ್ಲದೆ, ಫಲವತ್ತಾದ ಮಣ್ಣು ಕೊಚ್ಚಿ ಹೋಗಿ ರೈತರ ಜಮೀನುಗಳು ಬಂಜರು ಭೂಮಿಗಳಾಗಿ ಪರಿವರ್ತನೆಗೊಂಡಿವೆ. ನಾಗಾವಿ ಗ್ರಾಮದ ವಿಜಯನಗರ ಅರಸರ ಕಾಲದ ಬೆಕ್ಕಿನಕೆರೆ, ಬಿಕ್ಕಿನಕೆರೆ ಬಾರಿ ಮಳೆಯಿಂದ ತುಂಬಿದ್ದು ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಗ್ರಾಮದ ನೂರಾರು ಮನೆಗಳಲ್ಲಿ ನೀರು ಹರಿದು ಮನೆಗಳಿಗೆ ದಕ್ಕೆಯಾಗಿದೆ.