ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶ್ಮೀರ ಪೋಲೀಸರ ಖಚಿತ ಮಾಹಿತಿಯ ಮೇಲೆ ಶ್ರೀನಗರದ ನೌಗಾಮ್ ಜಿಲ್ಲೆಯಲ್ಲಿ ಭದ್ರತಾಪಡೆಗಳು ಮತ್ತು ಕಾಶ್ಮೀರ ಪೋಲೀಸರು ಎನ್ಕೌಂಟರ್ ನಡೆಸಿದ್ದು ಕಾರ್ಯಾಚರಣೆ ವೇಳೆ ಇಬ್ಬರು ಉಗ್ರರು ಹತರಾಗಿದ್ದಾರೆ. ಕಾರ್ಯಾಚರಣೆ ಇನ್ನೂ ಜಾರಿಯಲ್ಲಿದೆ ಎಂದು ಮೂಲಗಳು ವರದಿ ಮಾಡಿವೆ.
ಹತರಾದ ಇಬ್ಬರು ಭಯೋತ್ಪಾದಕರು ಅನ್ಸರ್ ಘಜ್ವತ್-ಉಲ್-ಹಿಂದ್ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅನ್ಸರ್ ಘಜ್ವತ್-ಉಲ್-ಹಿಂದ್ ಒಂದು ಭಯೋತ್ಪಾದಕ ಸಂಘಟನೆಯಾಗಿದ್ದು, ಇದು ಅಲ್ ಖೈದಾದೊಂದಿಗೆ ಸಂಪರ್ಕ ಹೊಂದಿದೆ ಮತ್ತು ಈ ಭಯೋತ್ಪಾದಕ ಗುಂಪು ಕಾಶ್ಮೀರ ಕಣಿವೆಯಲ್ಲಿ ಸಕ್ರಿಯವಾಗಿದೆ ಎಂದು ವರದಿಯಾಗಿದೆ.
“ಶ್ರೀನಗರ ಪೊಲೀಸರು ಮತ್ತು ಸೇನೆಯ 50RRನ ಸೈನಿಕರು ಕಾರ್ಯಾಚರಣೆಯಲ್ಲಿದ್ದಾರೆ” ಎಂದು ಕಾಶ್ಮೀರ ಪೊಲೀಸರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಇಬ್ಬರು ಉಗ್ರರನ್ನು ಪುಲ್ವಾಮಾ ಮೂಲದ ಐಜಾಜ್ ರಸೂಲ್ ನಜರ್ ಮತ್ತು ಶಾಹಿದ್ ಅಹ್ಮದ್ ಎಂದು ಗುರುತಿಸಲಾಗಿದೆ.
“ಅವರು ಇತ್ತೀಚೆಗೆ ಪುಲ್ವಾಮಾದಲ್ಲಿ 2/9/22 ರಂದು ಪಶ್ಚಿಮ ಬಂಗಾಳದ ಮುನೀರ್ ಉಲ್ ಇಸ್ಲಾಂ ಎಂಬ ಹೊರಗಿನ ಕಾರ್ಮಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದಾರೆ” ಎನ್ನಲಾಗಿದೆ.