ಹೊಸದಿಗಂತ ವರದಿ ಶಿವಮೊಗ್ಗ:
ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ. ನೀವು ಸಚಿವರಾಗಲು ಬನ್ನಿ ಎಂದು ಯಾವಾಗ ಪಕ್ಷದ ವರಿಷ್ಠರು ಹಾಗೂ ಸಿಎಂ ಕರೆಯುತ್ತಾರೋ ಆವಾಗ ಹೋಗಲು ನಾನು ಸಿದ್ಧ. ಅದರ ಹೊರತಾಗಿ ಸಂಪುಟ ವಿಸ್ತರಣೆ ಯಾವಾಗ ಎಂಬುದು ನನಗೆ ಗೊತ್ತಿಲ್ಲ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಬಂದ ಆರೋಪದಿಂದ ಮುಕ್ತನಾದ ಬಳಿಕ ಸಂಪುಟಕ್ಕೆ ತೆಗೆದುಕೊಳ್ಳುವುದಾಗಿ ವರಿಷ್ಠರು ಹಾಗೂ ಸಿಎಂ ಹೇಳಿದ್ದರು. ಮನೆ ದೇವರಾದ ಚೌಡೇಶ್ವರಿ ಆಶೀರ್ವಾದದಿಂದ ಆರೋಪ ಮುಕ್ತವಾಗಿದ್ದೇನೆ. ವರಿಷ್ಠರು ಈ ಹಿಂದೆ ನೀಡಿದ ಮಾತಿನಂತೆ ಯಾವಾಗ ಬನ್ನಿ ಎಂದು ಕರೆಯುತ್ತಾರೋ ಆಗ ಹೋಗಲು ಸಿದ್ಧ ಎಂದರು.
ಯಾವ ಕಾರಣಕ್ಕೆ ಇನ್ನೂ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುತ್ತಿಲ್ಲ ಎಂದು ನನಗೆ ಗೊತ್ತಿಲ್ಲ. ಅವರಿಗೆ ಕೇಳಬೇಕು ಎಂದ ಅವರು, ಸಂಘಟನೆ ಕೆಲಸಕ್ಕೆ ರಾಜ್ಯಾಧ್ಯಕ್ಷರು ಕರೆದಿದ್ದಾರೆ. ಓಬಿಸಿ ಮೋರ್ಚಾ ಬಲಪಡಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಸೋಮವಾರ ಅಧ್ಯಕ್ಷರನ್ನು ಭೇಟಿ ಮಾಡುವುದಾಗಿ ಹೇಳಿದರು.