ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರವು ಪಿಎಂ ಕೇರ್ಸ್ ಫಂಡ್ನ ಟ್ರಸ್ಟಿಗಳಾಗಿ ಹಲವರ ಹೆಸರುಗಳನ್ನು ನಾಮನಿರ್ದೇಶನ ಮಾಡಿದೆ. ಇದರಲ್ಲಿ ಪ್ರಮುಖ ಕೈಗಾರಿಕೋದ್ಯಮಿ, ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ, ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶ ಕೆಟಿ ಥಾಮಸ್, ಲೋಕಸಭೆಯ ಮಾಜಿ ಉಪ ಸ್ಪೀಕರ್ ಕರಿಯಾ ಮುಂಡಾ ಸೇರಿದಂತೆ ಇತರರನ್ನು ಪಿಎಂ ಕೇರ್ಸ್ ಫಂಡ್ನ ಟ್ರಸ್ಟಿಗಳಾಗಿ ನಾಮನಿರ್ದೇಶನ ಮಾಡಲಾಗಿದೆ ಎಂದು ಸರ್ಕಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಹೊಸದಾಗಿ ನೇಮಕಗೊಂಡ ಸದಸ್ಯರನ್ನು ಒಳಗೊಂಡಂತೆ ಪಿಎಂ ಕೇರ್ಸ್ ಫಂಡ್ ಟ್ರಸ್ಟಿಗಳ ಮಂಡಳಿಯೊಂದಿಗೆ ಪ್ರಧಾನ ಮಂತ್ರಿ ಸಭೆ ನಡೆಸಿದ ಒಂದು ದಿನದ ನಂತರ ಈ ಪ್ರಕಟಣೆ ಹೊರಬಿದ್ದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪಿಎಂ ಕೇರ್ಸ್ ಫಂಡ್ ಸದಸ್ಯರೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಉಪಸ್ಥಿತರಿದ್ದರು. 4345 ಮಕ್ಕಳನ್ನು ಬೆಂಬಲಿಸುವ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆ ಸೇರಿದಂತೆ ಪಿಎಂ ಕೇರ್ಸ್ ನಿಧಿಯ ಸಹಾಯದಿಂದ ಕೈಗೊಂಡ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಸ್ತುತಿ(ಪ್ರಸೆಂಟೇಷನ್) ನೀಡಲಾಯಿತು. ದೇಶಕ್ಕೆ ನಿರ್ಣಾಯಕ ಸಮಯದಲ್ಲಿ ನಿಧಿಯು ನಿರ್ವಹಿಸಿದ ಪಾತ್ರವನ್ನು ಟ್ರಸ್ಟಿಗಳು ಶ್ಲಾಘಿಸಿದರು. ಪಿಎಂ ಕೇರ್ಸ್ ನಿಧಿಗೆ ಉದಾರ ಕೊಡುಗೆ ನೀಡಿದ ದೇಶದ ಜನರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿ ಅವರು ಪಿಎಂ ಕೇರ್ಸ್ ನಿಧಿಯ ಅವಿಭಾಜ್ಯ ಅಂಗವಾಗಿರುವುದಕ್ಕಾಗಿ ಟ್ರಸ್ಟಿಗಳನ್ನು ಸ್ವಾಗತಿಸಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮತ್ತೊಂದೆಡೆ, ಅಧಿಕಾರಿ ರಾಜೀವ್ ಮೆಹ್ರಿಷಿ, ಇನ್ಫೋಸಿಸ್ ಫೌಂಡೇಶನ್ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ, ಟೀಚ್ ಫಾರ್ ಇಂಡಿಯಾ ಸಹ-ಸಂಸ್ಥಾಪಕ ಆನಂದ್ ಶಾ ಅವರನ್ನು ಪಿಎಂ ಕೇರ್ಸ್ ಫಂಡ್ನ ಸಲಹಾ ಮಂಡಳಿಗೆ ನಾಮನಿರ್ದೇಶನ ಮಾಡಲಾಗಿದೆ. ಹೊಸ ಟ್ರಸ್ಟಿಗಳು, ಸಲಹೆಗಾರರ ಭಾಗವಹಿಸುವಿಕೆಯು ಸಾರ್ವಜನಿಕ ಜೀವನದಲ್ಲಿ ಅವರ ಅಪಾರ ಅನುಭವವು ವಿವಿಧ ಸಾರ್ವಜನಿಕ ಅಗತ್ಯಗಳಿಗೆ ಹೆಚ್ಚು ಸ್ಪಂದಿಸುವಂತೆ ಅವರಿಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ ಎಂದು ಪ್ರಧಾನಿ ತಿಳಿಸಿದರು.