ದಿಗಂತ ಡಿಜಿಟಲ್ ಡೆಸ್ಕ್:
ಸಬರಮತಿ ರೈಲಿನಲ್ಲಿ 58 ಮಂದಿ ಅಮಾಯಕ ಶ್ರೀರಾಮ ಭಕ್ತರ ನರಮೇಧ ಬಳಿಕ ಸ್ಫೋಟಗೊಂಡ ಗೋಧ್ರೋತ್ತರ ಗಲಭೆ ಪ್ರಕರಣದಲ್ಲಿ ಗುಜರಾತ್ ಸರ್ಕಾರಕ್ಕೆ ಅಪಖ್ಯಾತಿ ಉಂಟು ಮಾಡಲು ಹಾಗೂ ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿ ಅವರನ್ನು ಮರಣದಂಡನೆ ಶಿಕ್ಷೆಗೆ ಗುರಿ ಮಾಡುವುದಕ್ಕೆ ತೀಸ್ತಾ ಸೆಟಲ್ವಾಡ್ ಸಂಚು ರೂಪಿಸಿದ್ದ ಆಘಾತಕಾರಿ ಅಂಶ ವಿಶೇಷ ತನಿಖಾ ತಂಡ (ಸಿಟ್) ದಾಖಲಿಸಿದ ಆರೋಪಪಟ್ಟಿಯಿಂದ ಬಹಿರಂಗಗೊಂಡಿದೆ.
ಈ ಸಂಚಿನಲ್ಲಿ ಸೆಟಲ್ವಾಡ್, ಮಾಜಿ ಪೊಲೀಸ್ ಮಹಾ ನಿರ್ದೇಶಕ ಆರ್ ಬಿ ಶ್ರೀಕುಮಾರ್ (ನಿವೃತ್ತ) ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಶಾಮೀಲಾಗಿದ್ದಾಗಿ , ಅವರ ವಿರುದ್ಧದ ಗಲಭೆ ಪ್ರಕರಣದಲ್ಲಿ ‘ಪುರಾವೆಗಳ ತಯಾರಿಕೆ’ ಆರೋಪದ ಸಂಬಂಧ 100 ಪುಟಗಳ ಆರೋಪ ಪಟ್ಟಿಯನ್ನು ಸಿಟ್ ಅಹ್ಮದಾಬಾದ್ ಮೆಟ್ರೋ ಕೋರ್ಟ್ಗೆ ಸಲ್ಲಿಸಿದೆ.
ಇದರಂತೆ, ಆರೋಪಿ ತೀಸ್ತಾ ಸೆಟಲ್ವಾಡ್ ಅಂದಿನ ಸಿಎಂ ನರೇಂದ್ರ ಮೋದಿ ಅವರಿಗೆ ಮರಣದಂಡನೆ ಶಿಕ್ಷೆಯಾಗುವಂತೆ ಮಾಡಲು ಸಂಚು ರೂಪಿಸಿದ್ದರು. ಸರ್ಕಾರ ಭಾಗವಾಗಿದ್ದರೂ ಆರ್. ಬಿ. ಶ್ರೀಕುಮಾರ್ ಹಾಗೂ ಸಂಜೀವ್ ಭಟ್ ತೀಸ್ತಾಗಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು ಹಾಗೂ ಅದನ್ನು ಅಧಿಕೃತ ಎಂಟ್ರಿಗಳಿಗೆ ಸೇರಿಸಿದ್ದರು ಎಂಬ ಅಂಶವನ್ನೂ ಆರೋಪ ಪಟ್ಟಿ ನ್ಯಾಯಾಲಯಕ್ಕೆ ತಿಳಿಸಿದೆ. ಈ ಆರೋಪಿಗಳು ನರೇಂದ್ರ ಮೋದಿ ಅವರ ರಾಜಕೀಯ ಭವಿಷ್ಯವನ್ನು ಅಂತ್ಯಗೊಳಿಸಲು ಬಯಸಿದ್ದರು ಹಾಗೂ ಅವರ ಖ್ಯಾತಿಗೆ ಧಕ್ಕೆ ಉಂಟುಮಾಡಲು ಬಯಸಿದ್ದರು.ಇದಕ್ಕಾಗಿ ನಕಲಿ ದಾಖಲೆ, ಅಫಿಡವಿಟ್ ಗಳನ್ನು ಸೃಷ್ಟಿಸಲು ವಕೀಲರ ಪಡೆಯನ್ನೇ ನೇಮಕ ಮಾಡಿಕೊಳ್ಳಲಾಗಿತ್ತು ಎಂದೂ ಆರೋಪಪಟ್ಟಿ ವಿವರಿಸಿದೆ.