ಭುವನೇಶ್ವರ್- ಹರ್ಷಲ್​ ಪಟೇಲ್​ ಬೌಲಿಂಗ್ ನಲ್ಲಿ ಸತತ ವೈಫಲ್ಯ: ಬೆಂಬಲಕ್ಕೆ ನಿಂತ ನಾಯಕ ರೋಹಿತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತ ತಂಡದ ಬೌಲರ್ ಭುವನೇಶ್ವರ್​ ಕುಮಾರ್​ ಮತ್ತು ಹರ್ಷಲ್​ ಪಟೇಲ್​ ಸತತ ವೈಫಲ್ಯ ಕಾಣುತ್ತಿದ್ದರೂ, ಅವರ ಆಟವನ್ನು ನಾಯಕ ರೋಹಿತ್​ ಶರ್ಮಾ ಸಮರ್ಥಿಸಿಕೊಂಡಿದ್ದಾರೆ. ಟಿ-20 ವಿಶ್ವಕಪ್​ ವೇಳೆಗೆ ಅವರು ಫಾರ್ಮ್​ಗೆ ಮರಳುತ್ತಾರೆ ಎಂಬ ವಿಶ್ವಾಸವನ್ನು ರೋಹಿತ್​ ಹೇಳಿದ್ದಾರೆ.

ಡೆತ್​ ಓವರ್​ನಲ್ಲಿ ಭುವನೇಶ್ವರ್​​ ಕುಮಾರ್​ ಬೌಲ್​ ಮಾಡಿದರೆ ಎದುರಾಳಿ ತಂಡ ಸಣ್ಣಗೆ ನಡುಗುತ್ತಿತ್ತು. ರನ್​ ಗಳಿಸಲು ಪರದಾಡಬೇಕಿತ್ತು. ಆದರೆ, ಏಷ್ಯಾಕಪ್​ ವೇಳೆಯಿಂದ ಭುವನೇಶ್ವರ್​ ಕುಮಾರ್​ ಬೌಲಿಂಗ್​ ಯಾಕೋ ಲಯವನ್ನೇ ಕಳೆದುಕೊಂಡಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭುವಿ 19ಕ್ಕೂ ಅಧಿಕ ರನ್​ ಚಚ್ಚಿಸಿಕೊಂಡು ಪಂದ್ಯ ಸೋಲಿಗೆ ಕಾರಣವಾಗಿದ್ದರು.

ಅದಾದ ಬಳಿಕ ಆಸೀಸ್​ ಸರಣಿಯಲ್ಲೂ ಭುವನೇಶ್ವರ್​ 12 ರ ಎಕಾನಮಿಯನ್ನು ಬೌಲಿಂಗ್​ ಮಾಡಿ ಹೆಚ್ಚು ರನ್​ ಬಿಟ್ಟುಕೊಡುತ್ತಿದ್ದಾರೆ. ಇದು ತಂಡದ ಮೇಲೆ ಭಾರಿ ಹೊರೆ ಬೀಳುತ್ತಿದ್ದು, ಸೋಲಿಗೂ ಕಾರಣವಾಗುತ್ತಿದೆ.

ಹರ್ಷಲ್​ ಪಟೇಲ್ ಅದೇ ರಾಗ​:
ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ಹರ್ಷಲ್​ ಪಟೇಲ್​ ಕೂಡ ಭುವನೇಶ್ವರ್​ ಹಾದಿಯಲ್ಲಿದ್ದಾರೆ. ಆಸೀಸ್​ ವಿರುದ್ಧದ ಮೂರು ಪಂದ್ಯಗಳಲ್ಲಿ ಹರ್ಷಲ್​ 8 ಓವರ್​ ಬೌಲಿಂಗ್​ ಮಾಡಿದ್ದು 99 ರನ್​ಗಳನ್ನು ಚಚ್ಚಿಸಿಕೊಂಡು ದುಬಾರಿಯಾಗಿದ್ದಾರೆ. ಅಲ್ಲದೇ ವಿಕೆಟ್​ ಪಡೆಯಲು ಹರಸಾಹಸ ಪಡುತ್ತಿದ್ದಾರೆ.

ಇನ್ನು ಇಬ್ಬರು ಮುಂಚೂಣಿ ದಾಳಿಕೋರರ ಬೌಲಿಂಗ್ ಲಯ ಕಳೆದುಕೊಂಡಿದ್ದರೂ, ನಾಯಕ ರೋಹಿತ್​ ಶರ್ಮಾ ಮಾತ್ರ ಅವರ ಮೇಲೆ ವಿಶ್ವಾಸ ಕಳೆದುಕೊಂಡಿಲ್ಲ. ಭುವಿ ಮತ್ತು ಹರ್ಷಲ್​ ಪಟೇಲ್​ಗೆ ಸಮಯ ಬೇಕಿದೆ. ಅವರ ಕಳಪೆ ಫಾರ್ಮ್ ಹೆಚ್ಚು ಕಾಲ ಹೀಗೆಯೇ ಉಳಿಯುವುದಿಲ್ಲ. ಅವರ ಆಟ ಏನೆಂಬುದನ್ನು ನಾವು ಹಿಂದೆ ನೋಡಿದ್ದೇವೆ ಎಂದು ಹೇಳಿದ್ದಾರೆ.

ಭುವನೇಶ್ವರ್​ ಯಾವುದೇ ಆತ್ಮವಿಶ್ವಾಸದ ಕೊರತೆ ಇಲ್ಲ. ಆತನ ಕೌಶಲ್ಯಗಳ ಮೇಲೆ ನಾವು ನಂಬಿಕೆ ಇಡಬೇಕು. ಪಂದ್ಯದಲ್ಲಿ ಡೆತ್ ಓವರ್‌ ವೇಳೆ ಏನು ಬೇಕಾದರೂ ಆಗಬಹುದು. ಆಟಗಾರನೊಬ್ಬನನ್ನು ಟೀಕಿಸಲು ಸಾಧ್ಯವಿಲ್ಲ. ಇದಕ್ಕಾಗಿ ಬೌಲಿಂಗಹ್​ ಆಯ್ಕೆಯನ್ನು ಹೊಂದಿಸಬೇಕಿದೆ ಎಂದು ಹೇಳಿದರು.

ಹರ್ಷಲ್​ ಪಟೇಲ್​ ಕೂಡ ಗಾಯಗೊಂಡು ಸುಮಾರು 2 ತಿಂಗಳು ಕ್ರಿಕೆಟ್​ನಿಂದ ದೂರವಿದ್ದರು. ಆಸೀಸ್​ ವಿರುದ್ಧದ ಮೂರು ಪಂದ್ಯಗಳಿಂದ ಅವರ ಆಟವನ್ನು ನಿರ್ಣಯಿಸಬಾರದು. ಗಾಯದಿಂದ ಮರಳಿ ಕ್ರಿಕೆಟ್​ ಆಡುವುದು ಸುಲಭವಲ್ಲ. ಅವರೂ ಕೂಡ ಬೇಗನೆ ಫಾರ್ಮ್​ಗೆ ಮರಳುತ್ತಾರೆ ಎಂದು ಬೆಂಬಲ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!