ಹೊಸದಿಗಂತ ವರದಿ ಬಳ್ಳಾರಿ:
ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಅ.15 ರಂದು ಭಾರತ್ ಜೋಡೋ ಯಾತ್ರೆಯ ಸಾವರ್ಜನಿಕ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಸಮಾವೇಶಕ್ಕೆ ಪಕ್ಷದ ಅನೇಕ ದಿಗ್ಗಜರು ಸಾಕ್ಷಿಯಾಗಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಢಿ ಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಅ.15ಕ್ಕೆ 24ನೇ ದಿನಕ್ಕೆ ಕಾಲಿಡಲಿದ್ದು, ಗಣಿನಾಡು ಬಳ್ಳಾರಿಗೆ ಜಿಲ್ಲೆಗೆ ಪ್ರವೇಶ ಮಾಡಲಿದೆ, ಯಾತ್ರೆ ಪ್ರಾರಂಭವಾಗಿ ಬಳ್ಳಾರಿಗೆ 1 ಕಿ.ಮೀ.ಕ್ರಮಿಸಿದಂತಾಗಲಿದೆ. ಈ ಹಿನ್ನೆಲೆ ವಿಶೇಷವಾಗಿ ರಾಹುಲ್ ಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸಲು ದೇಶದ ನಾನಾ ರಾಜ್ಯದ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಸೇರಿ ಇತರೇ ನಾಯಕರು ಶುಭಾಷಯಗಳನ್ನು ತಿಳಿಸಲಿದ್ದಾರೆ, ವಿಶೇಷವಾಗಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ಬಳ್ಳಾರಿ ಬಗ್ಗೆ ಅಪಾರ ಪ್ರೀತಿ, ಅಭಿಮಾನವಿದೆ, ಈ ಹಿನ್ನೆಲೆ ರಾಜ್ಯದಲ್ಲೇ ಬಳ್ಳಾರಿ ಆಯ್ಕೆ ಮಾಡಿಕೊಂಡಿದ್ದು, ಸಮಾವೇಶವನ್ನು ಆಯೋಜಿಸಲಾಗಿದೆ.
ರಾಹುಲ್ ಗಾಂಧಿ ಅವರು ಸಂಜೆ 4ಕ್ಕೆ ಬಳ್ಳಾರಿ ಪ್ರವೇಶಿಸಲಿದ್ದಾರೆ, ಅ.15ರಂದು ಬೆಳಿಗ್ಗೆ 6.30 ಕ್ಕೆ ಪಾದಯಾತ್ರೆ ಶುರುವಾಗಲಿದ್ದು, ನಗರದಲ್ಲಿ ಆಯೋಜಿಸಿದ ಸಮಾವೇಶದ ಮುಖ್ಯವೇದಿಕೆಗೆ ರಾಹುಲ್ ಗಾಂಧಿ ಅವರು ತಲುಪಲಿದ್ದಾರೆ. ನಂತರ ಯಾತ್ರೆ ಮುಂದುವರೆಯಲಿದೆ ಎಂದರು. ಕೊಪ್ಪಳ, ಗದಗ್, ಬಳ್ಳಾರಿ, ವಿಜಯನಗರ ಸೇರಿ ನಾನಾ ಕಡೆಯಿಂದ ಆಗಮಿಸುವ ಕಾರ್ಯಕರ್ತರು ಬೆ.10ರ ಒಳಗೆ ಪಾದಯಾತ್ರೆಯಲ್ಲಿ ಭಾಗವಹಿಸಿ, ಲೇಟ್ ಆದರೇ, 5-6 ಕಿ.ಮೀ.ನಡೆಯಬೇಕಾಗಲಿದೆ, ಬೇಗನೇ ಬಂದು ಪಾದಯಾತ್ರೆಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.