ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ. ಮುರುಗೇಶ ಆರ್.ನಿರಾಣಿ ಅವರು ಭಾರತ್ ಬಯೋಟೆಕ್ನ ಅಧ್ಯಕ್ಷ ಡಾ. ಕೃಷ್ಣ ಎಂ. ಎಲ್ಲ ಅವರನ್ನು ಇಂದು(ಶುಕ್ರವಾರ) ಹೈದರಾಬಾದ್ನಲ್ಲಿ ಭೇಟಿಯಾದರು. ಇವರಿಬ್ಬರ ಭೇಟಿ ರಾಜ್ಯದಲ್ಲಿ ಹೆಚ್ಚಿನ ಹೂಡಿಕೆಗೆ ಸಾಕ್ಷಿಯಾಗಿದೆ. ಜೊತೆಗೆ ಕರ್ನಾಟಕದಲ್ಲಿ ಹೂಡಿಕೆ ಹಾಗೂ ಉದ್ಯಮ ವಿಸ್ತರಣೆಗೆ ಇರುವ ಅವಕಾಶಗಳ ಬಗ್ಗೆ ಕೃಷ್ಣ ಅವರಿಗೆ ಸಚಿವರು ಮಾಹಿತಿ ನೀಡಿದರು. ಹಾಗೆಯೇ ನವೆಂಬರ್ 2 ರಿಂದ 4ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಭೆಗೆ ಕೃಷ್ಣ ಅವರನ್ನು ಔಪಚಾರಿಕವಾಗಿ ಆಹ್ವಾನಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಇಬ್ಬರೂ ಪರಸ್ಪರ ಮಾತುಕತೆ ನಡೆಸಿ, ಸುಲಲಿತ ವ್ಯವಹಾರಕ್ಕೆ ಒತ್ತು ನೀಡುವ ಕರ್ನಾಟಕದಲ್ಲಿ ಹೂಡಿಕೆದಾರರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಲು ಬದ್ಧ ಎಂಬ ಭರವಸೆ ನೀಡಿದರು. ಮಾತುಕತೆ ವೇಳೆ ಉದ್ಯಮಕ್ಕೆ ಪೂರಕ ವಾತಾವರಣ ಇರುವ ಕರ್ನಾಟಕದಲ್ಲಿ ಹೆಚ್ಚಿನ ಹೂಡಿಕೆ ಮಾಡುವ ಉದ್ದೇಶ ಇದೆ ಎಂಬ ಅಭಿಪ್ರಾಯವನ್ನು ಕೃಷ್ಣ ಅವರು ವ್ಯಕ್ತಪಡಿಸಿದರು.
ಸಮಾವೇಶದ ಪೂರ್ವಭಾವಿಯಾಗಿ ಹೈದರಾಬಾದ್ನಲ್ಲಿ ಕೈಗೊಂಡಿರುವ ರೋಡ್ಶೋನಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ರಮಣರೆಡ್ಡಿ, ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.