ಇಂದಿನಿಂದ ಪ್ರಯಾಗರಾಜ್‌ನಲ್ಲಿ ಆರ್‌ಎಸ್‌ಎಸ್‌ ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಳಿ ಬೈಠಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಳಿಯ ಸಭೆ ಇಂದಿನಿಂದ ನಾಲ್ಕು ದಿನಗಳ ಕಾಲ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿದೆ.ಈ ವಾರ್ಷಿಕ ಸಭೆಯಲ್ಲಿ ಸಂಘದ ಎಲ್ಲಾ 45 ಪ್ರಾಂತಗಳ ಎಲ್ಲಾ ಪ್ರಾಂತ ಸಂಘಚಾಲಕರು, ಕಾರ್ಯವಾಹರು ಮತ್ತು ಪ್ರಚಾರಕರು ಹಾಗು ಸಹ ಪ್ರಾಂತಕಾರ್ಯವಾಹ, ಸಹ ಪ್ರಾಂತಪ್ರಚಾರಕರು ಭಾಗವಹಿಸಲಿದ್ದಾರೆ. ಸರಸಂಘಚಾಲಕರಾದ ಡಾ. ಮೋಹನ್‌ ಭಾಗವತ್‌, ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು, ಸಹ ಸರಕಾರ್ಯವಾಹರು ಸೇರಿದಂಯೆ ಅಖಿಲ ಭಾರತ ಮಟ್ಟದ ಇತರ ಪದಾಧಿಕಾರಿಗಳು ಹಾಗೂ ಕಾರ್ಯಕಾರಿಣಿ ಮಂಡಳಿಯ ಆಹ್ವಾನಿತ ಸದಸ್ಯರು ಬೈಠಕ್‌ನಲ್ಲಿ ಉಪಸ್ಥಿತರಿರುವರು.

ಸಭೆ ಕುರಿತು ಶನಿವಾರ ಮಾತನಾಡಿದ ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರಚಾರ ಪ್ರಮುಖರಾದ ಶ್ರೀ ಸುನಿಲ್ ಅಂಬೇಕರ್‌, ಕಳೆದ ಮಾರ್ಚ್‌ನಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ರೂಪಿಸಲಾದ ವಾರ್ಷಿಕ ಕಾರ್ಯಯೋಜನೆಯ ಪ್ರಗತಿ ಬಗ್ಗೆ ಕೂಡ ಈ ನಾಲ್ಕು ದಿನಗಳ ಸಭೆಯಲ್ಲಿ ಪರಾಮರ್ಶಿಸಲಾಗುವುದು. ಜೊತೆಗೆ ಸಭೆಯಲ್ಲಿ ಸಂಘಟನಾ ಕಾರ್ಯಗಳ ವಿಸ್ತರಣೆ ಮತ್ತು ಸಂಘ ಶಿಕ್ಷಾ ವರ್ಗದ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ಹಾಗೆಯೇ ದೇಶದ ಪ್ರಮುಖ ಸಮಕಾಲೀನ ಸಮಸ್ಯೆಗಳ ಕುರಿತು ಕೂಡ ಚರ್ಚೆ ನಡೆಯಲಿದೆ ಎಂಬುದಾಗಿ ಮಾಹಿತಿ ನೀಡಿದರು.

ವಿಜಯದಶಮಿಯ ಸಂದರ್ಭದಲ್ಲಿ ಸರಸಂಘಚಾಲಕರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಪ್ರಮುಖ ವಿಷಯಗಳ ಅನುಷ್ಠಾನದ ಮಾರ್ಗಗಳು ಮತ್ತು ವಿಧಾನಗಳನ್ನು ಕುರಿತಾಗಿ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಇನ್ನು, 2025ಕ್ಕೆ ಆರ್‌ಎಸ್‌ಎಸ್‌ ನೂರು ವರ್ಷಗಳನ್ನು ಪೂರ್ಣಗೊಳಿಸಲಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ತನ್ನ ಶಾಖೆಗಳ ಸಂಖ್ಯೆಯನ್ನು ವಿಸ್ತರಿಸುವ ಯೋಜನೆಗಳನ್ನು ಸಹ ಸಭೆಯಲ್ಲಿ ಪರಿಗಣಿಸಲಾಗುತ್ತದೆ. ಪ್ರಸ್ತುತ 55,000 ಶಾಖೆಗಳಿದ್ದು, ಮಾರ್ಚ್ 2024 ರ ವೇಳೆಗೆ ಅದರ ಸಂಖ್ಯೆಯನ್ನು ಒಂದು ಲಕ್ಷಕ್ಕೆ ಏರಿಸುವ ಗುರಿಯನ್ನು ಹೊಂದಿದೆ.

ಸಭೆಯು ತೃತೀಯ ವರ್ಷದ ಸಂಘ ಶಿಕ್ಷಾ ವರ್ಗವನ್ನು ನಡೆಸುವ ಕುರಿತಾಗಿ ಚರ್ಚಿಸುತ್ತದೆ. ಈ ವರ್ಗವನ್ನು ಈ ಹಿಂದೆ ಕೇವಲ ಮೇ ತಿಂಗಳಲ್ಲಿ ಮಾತ್ರವೇ ನಡೆಸಲಾಗುತ್ತಿತ್ತು. ಈ ವರ್ಷ ನಾಗ್ಪುರದಲ್ಲಿ ನವೆಂಬರ್ 14 ರಿಂದ ಡಿಸೆಂಬರ್ 8 ರವರೆಗೆ ಆಯೋಜಿಸುವುದಾಗಿ ಮಾಹಿತಿ ನೀಡಿದರು. ಜೊತೆಗೆ ವಿಜಯದಶಮಿಯ ಉತ್ಸವದಲ್ಲಿ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರ ಭಾಷಣದಲ್ಲಿ ಹೇಳಿದ ಮಾತೃಭಾಷೆಯಲ್ಲಿ ಶಿಕ್ಷಣ, ಸಾಮಾಜಿಕ ಸಮಾನತೆ, ಸಮಾಜದ ಎಲ್ಲ ವರ್ಗದವರಲ್ಲಿ ಸಂವಾದ ಪ್ರಕ್ರಿಯೆ ಮತ್ತು ಮಹಿಳಾ ಸಬಲೀಕರಣದ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಈ ಸಭೆಯು ಜಿಲ್ಲೆಯ ಟ್ರಾನ್ಸ್ ಯಮುನಾ ಪ್ರದೇಶದ ಗೌಹಾನಿಯಾದ ಬಳಿಯ ವಾತ್ಸಲ್ಯ ಸಂಸ್ಥೆಯಲ್ಲಿ ನಡೆಯುತ್ತಿದ್ದು, ಅಕ್ಟೋಬರ್ 19 ರಂದು ಮುಕ್ತಾಯವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!