ಹಸು ಕಟ್ಟಲು ತೆರಳಿದ‌ ವಿದ್ಯಾರ್ಥಿನಿ ಕೆರೆಗೆ ಬಿದ್ದು ಸಾವು

ಹೊಸದಿಗಂತ ವರದಿ ಮಡಿಕೇರಿ:

ಹಸುವನ್ನು ಕಟ್ಟಲೆಂದು ತೆರಳಿದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಕಾಲು ಜಾರಿ‌ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮೂರ್ನಾಡು ಸಮೀಪದ ಕಿರುಂದಾಡು ಗ್ರಾಮದಲ್ಲಿ ನಡೆದಿದೆ.
ಪಾರಾಣೆ ಗ್ರಾ.ಪಂ. ಸದಸ್ಯೆ ದಾಕ್ಷಾಯಿಣಿ ಹಾಗೂ ಕುಶಾಲಪ್ಪ ದಂಪತಿಯ ಪುತ್ರಿ, ಮೂರ್ನಾಡು ಕಾಲೇಜಿನಲ್ಲಿ ಬಿ.ಕಾಂ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಚಸ್ಮಿಕಾ (20) ಮೃತ ದುರ್ದೈವಿ.
ಬುಧವಾರ ಬೆಳಗ್ಗೆ ಗದ್ದೆಯಲ್ಲಿ ದನ ಕಟ್ಟಲು ಕೆರೆಯ ಪಕ್ಕದ ದಾರಿಯಲ್ಲಿ ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ದುರ್ಮರಣಕ್ಕೀಡಾಗಿರುವುದಾಗಿ ಹೇಳಲಾಗಿದೆ.
ಮೃತದೇಹವನ್ನು ಕೆರೆಯಿಂದ ಹೊರತೆಗೆಯುವಲ್ಲಿ ನಾಪೋಕ್ಲುವಿನ ಅಬ್ದುಲ್ ರಜಾಕ್, ಅಬ್ದುಲ್ ಮಜೀದ್, ಶಮೀರ್ ಅವರುಗಳ ತಂಡ ಯಶಸ್ವಿಯಾಗಿದ್ದು,ಸ್ಥಳಕ್ಕೆ ನಾಪೋಕ್ಲು ಠಾಣಾಧಿಕಾರಿ ಸದಾಶಿವ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಗಳನ್ನು ಕಳೆದುಕೊಂಡ ತಂದೆ-ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು, ಚಸ್ಮಿಕಾ ಸಾವಿಗೆ ಗ್ರಾಮಸ್ಥರು ಕೂಡಾ ಕಂಬನಿ ಮಿಡಿದಿದ್ದಾರೆ.
ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!