ಹೊಸದಿಗಂತ ವರದಿ ಕುಶಾಲನಗರ:
ರಸ್ತೆ ದಾಟುತ್ತಿದ್ದ ಜಿಂಕೆಗೆ ಬೈಕ್ ಡಿಕ್ಕಿಯಾದ ಘಟನೆ ನಡೆದಿದ್ದು, ಆ ಜಿಂಕೆ ಅನತಿ ದೂರದಲ್ಲಿ ಸಾವನ್ನಪ್ಪಿರುವುದು ಗೋಚರಿಸಿದೆ.
ಕುಶಾಲನಗರದಿಂದ ಸಿದ್ದಾಪುರಕ್ಕೆ ತೆರಳುವ ಬಾಳುಗೋಡು – ರಸೂಲ್’ಪುರ ವ್ಯಾಪ್ತಿಯಲ್ಲಿ ಅರಣ್ಯದ ಒಂದು ಬದಿಯಿಂದ ಮತ್ತೊಂದು ಬದಿಗೆ ಜಿಂಕೆ ದಾಟುತ್ತಿದ್ದ ಸಂದರ್ಭ ರಸ್ತೆಯಲ್ಲಿ ಬಂದ ಬೈಕ್ ಡಿಕ್ಕಿಯಾಗಿದೆ.
ಆದರೂ ಸಾವರಿಸಿಕೊಂಡ ಜಿಂಕೆ ಎದ್ದು ಕುಂಟುತ್ತಾ ತೆರಳಿರುವುದು ಸಮೀಪದ ಹೋಂಸ್ಟೇ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸೋಮವಾರ ಸಂಜೆ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಗಂಡು ಜಿಂಕೆ ಅನತಿ ದೂರದಲ್ಲಿ ಹೋಗಿ ಪ್ರಾಣ ಬಿಟ್ಟಿದ್ದು, ಮುಖ, ತೊಡೆ ಭಾಗಕ್ಕೆ ಗಂಭೀರ ಗಾಯವಾಗಿರುವುದು ಕಂಡುಬಂದಿದೆ. ಘಟನೆಯಲ್ಲಿ ದ್ವಿಚಕ್ರ ವಾಹನದಲ್ಲಿ ದುಬಾರೆಯತ್ತ ತೆರಳುತ್ತಿದ್ದ ಇಬ್ಬರು ಟಿಬೆಟ್ ಮಹಿಳೆಯರು ಕೂಡಾ ಗಂಭೀರವಾಗಿ ಗಾಯಗೊಂಡಿರುವುದಾಗಿ ಹೇಳಲಾಗಿದೆ.