ಹೊಸದಿಗಂತ ವರದಿ,ಗದಗ:
ಸಿದ್ದರಾಮಯ್ಯ ಕೆಳ ಜಾತಿಯವರನ್ನು ಬಳಸಿಕೊಂಡು ಸಿಎಂ ಆದವರು. ಆದರೆ, ತಮ್ಮ ಅಧಿಕಾರವಧಿಯಲ್ಲಿ ಕೆಳ ಜಾತಿಗೆ ನ್ಯಾಯಕೊಡಿಸಲು ಯೋಚಿಸಲಿಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮೀಸಲಾತಿ ಹೆಚ್ಚಿಸಿದ ಬಳಿಕ ನಾವೂ ಹೋರಾಡಿದ್ದೇವೆ ಎಂದು ಕಾಂಗ್ರೆಸ್ನವರು ಅಪಸ್ವರ ಎತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಸ್ಸಿ/ಎಸ್ಟಿಗೆ ಮೀಸಲಾತಿ ಕೊಟ್ಟಿಲ್ಲ. ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ತರಲು ಸಿದ್ದರಾಮಯ್ಯ ಅವರಿಗೆ ಆಗಲಿಲ್ಲ. ಅಲ್ಲದೆ, ಕಾಂತರಾಜ್ ವರದಿಯನ್ನು ಸಿದ್ದರಾಮಯ್ಯ ಜಾರಿಗೆ ತರಲಿಲ್ಲ. ಜಸ್ಟೀಸ್ ನಾಗಮೋಹನದಾಸ್ ಅವರ ವರದಿಯನ್ನೂ ಜಾರಿ ಮಾಡ್ಲಿಲ್ಲ. ಮಂಡಲ್ ಕಮೀಷನ್ ಆಗುವಾಗ ಸಿದ್ದರಾಮಯ್ಯ ಎಲ್ಲಿದ್ದರು. ಈಗ
ಮಂಡಲ ಕಮೀಷನ್, ನಾಗಮೋಹನದಾಸ್ ವರದಿ ಜಾರಿ ಬಗ್ಗೆ ಕೇಳುತ್ತಿದ್ದಿರಾ ಎಂದು ಪ್ರಶ್ನೆ ಮಾಡಿದರು.
ಬಾಬಾಸಾಹೇಬರ ಆಶಯದಂತೆ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ನೀಡಲಾಗಿದೆ. ಪ್ರಸನ್ನಾನಂದ ಸ್ವಾಮಿಗಳ 250 ದಿನದ ಹೋರಾಟ ಅಲ್ಲ. ಅದು 40 ವರ್ಷದ ಹೋರಾಟ. ರಕ್ತದಿಂದ ಬರೆದುಕೊಡುತ್ತೇನೆ ಎಂದು ಭರವಸೆ ನೀಡಿದ್ದೆ, ಪಕ್ಷವು ಜೊತೆಗೆ ಇರುತ್ತೆ ಎನ್ನುವ ವಿಶ್ವಾಸವಿತ್ತು ಭರವಸೆಯಂತೆ ಮುಖ್ಯಮಂತ್ರಿ ಅವರು ಮೀಸಲಾತಿ ಹೆಚ್ಚಿಸಿದ್ದಾರೆ ಎಂದು ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.