ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುನೀತ್ ರಾಜ್ಕುಮಾರ್ ಅವರನ್ನು ಕುರಿತ ವಿಷಯವನ್ನು ಪಠ್ಯದಲ್ಲಿ ಸೇರಿಸುವ ಬಗ್ಗೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯೋತ್ಸವದಂದೇ ಪುನೀತ್ಗೆ ಕರ್ನಾಟಕ ರತ್ನ ನೀಡಬೇಕೆಂಬುದು ನಮ್ಮ ಇಚ್ಛೆಯಾಗಿತ್ತು, ಅದರಂತೆಯೇ ಇಂದೇ ಪ್ರಶಸ್ತಿ ನೀಡಲಾಗುತ್ತದೆ ಎಂದರು. ಪುನೀತ್ ಕನ್ನಡ ನೆಲಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹಲವು ಪರೋಪಕಾರಿ ಕೆಲಸ ಮಾಡಿದ್ದಾರೆ. ತಮ್ಮ ಅಂಗಾಂಗಳನ್ನೂ ದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಅವರು ಅಗಲಿದ ನಂತರ ಹಲವು ಮಂದಿ ನೇತ್ರದಾನಕ್ಕೆ ಮುಂದಾಗಿದ್ದಾರೆ. ವಯಸ್ಸು ಚಿಕ್ಕದಾದರೂ ಪುನೀತ್ ಬದುಕಿದ ಬಾಳು ದೊಡ್ಡದು, ಪ್ರೇರಣಾದಾಯಕ ಜೀವನ ಅವರದ್ದು ಎಂದಿದ್ದಾರೆ.
ಈಗಾಗಲೇ ಸಾಕಷ್ಟು ಮಂದಿ ಪುನೀತ್ ವಿಷಯವನ್ನು ಪಠ್ಯದಲ್ಲಿ ಸೇರಿಸಲು ಮನವಿ ಮಾಡಿದ್ದಾರೆ. ಈ ಬಗ್ಗೆ ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.