ಹೊಸದಿಗಂತ ಡಿಜಿಟಲ್ ಡೆಸ್ಕ್
1930ರಲ್ಲಿ ಗಾಂಧೀಜಿಯವರು ಅಸಹಕಾರ ಚಳವಳಿಗೆ ಕರೆಕೊಟ್ಟರು. ಅದನ್ನು ಕನ್ನಡ ನೆಲದ ಸಣ್ಣಪುಟ್ಟ ಹಳ್ಳಿಗಳೂ ಅಪ್ಪಿಕೊಂಡ ರೀತಿ ಮಾತ್ರ ಅದ್ಭುತ. ಉಪ್ಪಿನ ಸತ್ಯಾಗ್ರಹಕ್ಕೆ ಅಂಕೋಲ ಹೆಸರುವಾಸಿ. ಕಾನೂನು ಭಂಗ ಅಭಿಯಾನವನ್ನೂ ಕನ್ನಡ ನೆಲದ ಜನ ತೀವ್ರತರವಾಗಿ ಬೆಂಬಲಿಸಿದರು. ಸಾರಾಯಿ ಅಂಗಡಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ, ಕರ ನಿರಾಕರಣೆಗಳು ತೀವ್ರಗೊಂಡವು. ಕನ್ನಡ ಮಾತಾಡುವ ಬ್ರಿಟಿಷ್ ಜಿಲ್ಲೆಗಳಲ್ಲಿ ಸುಮಾರು 2,000 ಮಂದಿ ಬಂಧಿತರಾದರು.
ಗಾಂಧಿ-ಇರ್ವಿನ್ ಒಪ್ಪಂದದ ಕಾರಣಕ್ಕೆ ಅಸಹಕಾರ ಚಳವಳಿ ಸ್ವಲ್ಪ ದಿನ ಮಂದವಾಗಿತ್ತು. ಆದರೆ 1932ರಲ್ಲಿ ಮತ್ತೆ ಚಳವಳಿ ತೀವ್ರಗೊಂಡಿತು. ನಾವು ತೆರಿಗೆ ಕಟ್ಟುವುದಿಲ್ಲ ಎಂಬ ಅಭಿಯಾನ ತಾರಕಕ್ಕೆರಿದ ಪ್ರದೇಶಗಳೆಂದರೆ ಈಗಿನ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮತ್ತು ಅಂಕೋಲ. ಸುಮಾರು 800 ಕುಟುಂಬಗಳ ಜಮೀನು ಹರಾಜಾಯಿತು. ಉತ್ತರ ಕನ್ನಡ ಒಂದರಲ್ಲೇ ಸುಮಾರು ಸಾವಿರ ಮಂದಿ ಜೈಲು ಸೇರಿದರು. ಮಹಿಳೆಯರು ವಿಧವೆಯರನ್ನೂ ಹೊಂದಿದ್ದ ಆ ಜನರೆಲ್ಲ ತಮ್ಮ ಭೂಮಿಯನ್ನು ವಾಪಸು ಪಡೆಯಬೇಕಾದರೆ ಆರೇಳು ವರ್ಷಗಳೇ ಕಳೆದುಹೋದವು.
ಹೀಗೆ, ಸಂಪರ್ಕ ಸಾಧನಗಳು ಸೀಮಿತವಾಗಿದ್ದ ಕಾಲಘಟ್ಟದಲ್ಲೂ ರಾಷ್ಟ್ರೀಯ ನಾಯಕನೊಬ್ಬ ಕೊಟ್ಟ ಸ್ವಾತಂತ್ರ್ಯದ ಕರೆ ಮತ್ತು ಚಳವಳಿಯ ಸ್ವರೂಪ ಇಲ್ಲಿ ಹಬ್ಬುವುದಕ್ಕೆ ಯಾವ ತೊಂದರೆಯೂ ಆಗಲಿಲ್ಲ. ಕನ್ನಡತನದ ಜತೆಯಲ್ಲೇ ರಾಷ್ಟ್ರದ ವಿಶಾಲ ವಿಚಾರವೊಂದು ಕನ್ನಡಿಗರ ಮನದಿಂದ ಯಾವತ್ತೂ ಮಾಸಿರಲಿಲ್ಲ.