ಹೊಸದಿಗಂತ ವರದಿ,ಮೈಸೂರು:
ರಾಜ್ಯದಲ್ಲಿ ಕಬ್ಬಿನ ಎಫ್ ಆರ್ ಪಿ ದರವನ್ನು ಪುನರ್ಪರಿಶೀಲನೆ ಮಾಡಬೇಕು ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿಯನ್ನು ನೀಡಬೇಕು ಎಂದು ಒತ್ತಾಯಿಸಿ ಬುಧವಾರ ಕಬ್ಬು ಬೆಳೆಗಾರರು ಪೊರಕೆ ಚಳುವಳಿ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಪೊರಕೆ ಚಳುವಳಿ ನಡೆಸಿ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಮೈಸೂರು ಚಾಮರಾಜನಗರ ಜಿಲ್ಲಾ ಕಬ್ಬು ಬೆಳೆಗಾರ ಸಂಘದ ಕಾರ್ಯಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಮೈಸೂರು ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ರೈತ ಪರವಾಗಿ ಕೆಲಸವನ್ನು ಮಾಡದೆ, ಕೇವಲ ಪ್ರಚಾರಕ್ಕಾಗಿ ಕಾರ್ಯವನ್ನು ನಿರ್ವಹಿಸುವಂತೆ ಕಾಣುತ್ತಿದೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಚಳುವಳಿಯನ್ನು ನಡೆಸುತ್ತಿದ್ದರು, ಈ ಬಗ್ಗೆ ಗಮನ ಹರಿಸದೆ ಬಹಳ ನಿರ್ಲಕ್ಷ ವಹಿಸಿದ್ದಾರೆ ಎಂದು ಕಿಡಿಕಾರಿದರು.
ಬೇರೆ ಬೇರೆ ರಾಜ್ಯಗಳಲ್ಲಿ ಹಾಗೂ ನಮ್ಮ ಪಕ್ಕದ ಪಂಜಾಬ್ ರಾಜ್ಯದಲ್ಲಿ ಕಡಿಮೆ ಇಳುವರಿ ಬರುವ ಟನ್ ಕಬ್ಬಿಗೆ 3800 ರೂ ನಿಗದಿ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ 3500 ರೂ, ಗುಜರಾತ್ ನಲ್ಲಿ 4,400 ನಿಗದಿ ಮಾಡಲಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಕೇವಲ 3050ರೂ ಎಫ್ಆರ್ಪಿ ದರವನ್ನು ಮಾತ್ರ ಕೊಡಲು ಆದೇಶಿಸಲಾಗಿದೆ. ಇನ್ನೊಂದು ಕಡೆ 10% ಪರ್ಸೆಂಟ್ ಇದ್ದ ಇಳುವರಿಯನ್ನು 10.25% ಪರ್ಸೆಂಟ್ ಗೆ ಏರಿಕೆ ಮಾಡಿ, ರೈತರಿಗೆ ದ್ರೋಹ ಬಗೆಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸುಮಾರು 30 ಲಕ್ಷಕ್ಕೂ ಬೆಳೆಗಾರರಿದ್ದಾರೆ. ಇವರ ರಕ್ಷಣೆಯನ್ನು ಮಾಡದೆ, ಉದ್ಯಮಿಗಳು, ಸಕ್ಕರೆ ಕಾರ್ಖಾನೆಗಳ ಮಾಲೀಕರು ಪರವಾಗಿ ಮಾತನಾಡಿ, ಅವರ ಬೆನ್ನಿಗೆ ಸರ್ಕಾರ ನಿಲ್ಲುತ್ತಿದೆ. ದೇಶಕ್ಕೆ ಅನ್ನ ನೀಡುವ ರೈತನ ರಕ್ಷಣೆಗೆ ಬಾರದೆ, ಚುನಾಯಿತ ಪ್ರತಿನಿಧಿಗಳು ರೈತರ ಬೆನ್ನಿಗೆ ಚೂರಿ ಹಾಕಿದ್ದಾರೆ ಆರೋಪಿಸಿದರು.
ತಕ್ಷಣವೇ ಕಬ್ಬಿನ ಹಣವನ್ನು ವಿಳಂಬವಾಗಿ ಪಾವತಿಸಿದ ಕಾರ್ಖಾನೆಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. 16-18 ತಿಂಗಳಾಗಿರುವ ಕಬ್ಬು ಬೆಳೆದಿರುವ ರೈತರಿಗೆ ನಷ್ಟ ಪರಿಹಾರವನ್ನು ನೀಡುವಂತೆ ಸರ್ಕಾರ ಕಾರ್ಖಾನೆಗಳಿಗೆ ಆದೇಶಿಸಿ, ತಕ್ಷಣ ಕೊಡಿಸಬೇಕು. ವಿದ್ಯುತ್ ಖಾಸಗಿಕರಣವನ್ನು ತಕ್ಷಣ ಕೈಬಿಡಬೇಕು, ಬ್ಯಾಂಕ್ ಗಳಲ್ಲಿ ಕೃಷಿಗೆ ಕೊಡುವ ಸಾಲಕ್ಕೆ ಸಿಬಿಲ್ ಬಳಕೆಯನ್ನು ಕೈ ಬಿಡಬೇಕು. ಈ ಬೇಡಿಕೆಗಳು ಈಡೇರುವ ತನಕ ನಿರಂತರ ಚಳುವಳಿ ಮುಂದುವರಿಯುತ್ತದೆ ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ಎಚ್ಚರಿಸಿದರು.
ರೈತರ ಸಮಸ್ಯೆ ಬಗೆಹರಿಸದೆ ಇದ್ದರೆ ಜಿಲ್ಲಾ ಮಂತ್ರಿಗೆ ಕಪುö್ಪ ಬಾವುಟ ಪ್ರದರ್ಶನ ನಡೆಸುವುದಾಗಿ ಜಿಲ್ಲಾಡಳಿತಕ್ಕೆ ಪ್ರತಿಭಟನಾ ನಿರತರು ಎಚ್ಚರಿಕೆ ನೀಡಿದರು
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ನಂದಿಗುAದಪುರ ಪಿ ಸೋಮಶೇಖರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ, ನಾಗರಾಜ್ ಚುಂಚರಾಯನ ಹುಂಡಿ ಮಂಜು, ಬಸವರಾಜ, ಮೂಕಳ್ಳಿ ಮಹದೇವಸ್ವಾಮಿ, ಪಟೇಲ್ ಶಿವಮೂರ್ತಿ, ಹಾಲಿನ ನಾಗರಾಜ್, ಹಾಡ್ಯ ರವಿ, ಕೆರೆಹುಂಡಿ ರಾಜಣ್ಣ, ಕುರುಬೂರು ಸಿದ್ದೇಶ್, ನಂಜುAಡಸ್ವಾಮಿ, ಪ್ರದೀಪ್ ಕುರುಬೂರು, ಯಗ್ಗೊಟರ ಶಿವ ಸ್ವಾಮಿ, ಅಂಬಳೆ ಮಹದೇವಸ್ವಾಮಿ, ಮಂಜುನಾಥ್, ದೇವನೂರು ವಿಜಯೇಂದ್ರ, ಮಲಿಯೂರು ಪ್ರವೀಣ, ಹರ್ಷ ಇನ್ನು ಮುಂತಾದವರು ಭಾಗವಹಿಸಿದ್ದರು