ಹೊಸದಿಗಂತ ವರದಿ ಮಂಗಳೂರು:
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ಮುಂಜಾನೆ ರಾಷ್ಟ್ರೀಯ ತನಿಖಾ ದಳದಿಂದ ಬಂಧನಕ್ಕೊಳಗಾದ ಮೂರು ಮಂದಿಯನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಬೆಳ್ಳಾರೆ ನಿವಾಸಿಗಳಾದ ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಬೆಳ್ಳಾರೆ, ಸುಳ್ಯ ನಾವೂರು ನಿವಾಸಿ ಇಬ್ರಾಹಿಂ ಶಾನನ್ನು ಅವರ ಊರಿನಲ್ಲಿ ಹಾಗೂ ಪಿಎಫ್ಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆಯನ್ನು ಬೆಂಗಳೂರಿನಲ್ಲಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಎನ್ಐಎ ಪೊಲೀಸರು ಶನಿವಾರ ಮುಜಾನೆ ಬಂಧಿಸಿದ್ದರು.
ಬಂಧಿತರಾದ ಎಸ್ಡಿಪಿಐ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಬೆಳ್ಳಾರೆ ಹಾಗೂ ಸುಳ್ಯದ ನಾವೂರು ನಿವಾಸಿ ಪಿಎಫ್ಐ ಸದಸ್ಯ
ಇಬ್ರಾಹಿಂ ಶಾ ನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಕೆಲ ಗಂಟೆಗಳ ಬಳಿಕ ಬಂಧಿತರನ್ನು ಬೆಂಗಳೂರಿಗೆ ಎನ್ಐಎ ತಂಡ ಕರೆದೊಯ್ದಿರುವುದಾಗಿ ಮೂಲಗಳು ತಿಳಿಸಿವೆ.
ಮುಂಜಾನೆ 3 ಗಂಟೆಗೆ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಬಿಗಿ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಸಂಪ್ಯ ಎಸ್ಐ ಉದಯರವಿ, ಬೆಳ್ಳಾರೆ ಎಸ್ಐ ಸುಹಾಸ್ ಹಾಗೂ ಸಿಬಂದಿ ಸಹಕಾರ ನೀಡಿದ್ದರು.