ಹೊಸದಿಗಂತ ವರದಿ, ಮಡಿಕೇರಿ:
ರಾಜ್ಯ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಕೊಡಮಾಡುವ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಕೊಡಗಿನ ಗೋಣಿಕೊಪ್ಪ ಸಮೀಪದ ಅರುವತ್ತೊಕ್ಲುವಿನ ಸರ್ವದೈವತಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ನಮೃತಾ ಆಯ್ಕೆಯಾಗಿದ್ದಾರೆ.
ಗೋಣಿಕೊಪ್ಪ ಸಮೀಪದ ಸೀಗೆತೋಡು ನಿವಾಸಿ ಶಬರೀಶ ಮತ್ತು ಶಾಂತಾ ದಂಪತಿಯ ಪುತ್ರಿಯಾಗಿರುವ ನಮೃತಾ, ಕಳೆದ ವರ್ಷ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದಾಗ ಮನೆಯ ಸಮೀಪದಲ್ಲಿರುವ ಕೆರೆಯಲ್ಲಿ ಮಹಿಳೆಯೊಬ್ಬರು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದರು.
ಇದನ್ನು ಗಮನಿಸಿದ ನಮೃತಾ, ತಾನು ಧರಿಸಿದ್ದ ಶೂವನ್ನು ಕಳಚಿ, ಶಾಲೆಯ ಸಮವಸ್ತ್ರದಲ್ಲೇ ಕೆರೆಗೆ ಹಾರಿ ಆ ಮಹಿಳೆಯನ್ನು ರಕ್ಷಿಸಿದ್ದರು.
ಈಕೆಯ ಸಾಹಸದ ಬಗ್ಗೆ ಈ ಹಿಂದೆಯೇ ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು.
ಇದೀಗ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ರಾಜ್ಯ ಪ್ರಶಸ್ತಿಗೆ ಈಕೆಯನ್ನು ಆಯ್ಕೆ ಮಾಡಿದ್ದು, ನವೆಂಬರ್ 14ರ ಮಕ್ಕಳ ದಿನಾಚರಣೆಯಂದು ಬೆಂಗಳೂರಿನಲ್ಲಿ ಪ್ರತಿಷ್ಠಿತ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನು ಈಕೆಗೆ ಪ್ರದಾನ ಮಾಡಲಾಗುತ್ತಿದೆ.
ಈಕೆ ರಾಷ್ಟ್ರಮಟ್ಟದ ತ್ರೋಬಾಲ್ ಸ್ಪರ್ಧೆಯಲ್ಲೂ ಭಾಗವಹಿಸಿದ್ದು, ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.