February 21, 2026
Saturday, February 21, 2026
spot_img

🌪 ‘ದಿತ್ವಾಹ್’ ಚಂಡಮಾರುತ ಅಬ್ಬರ: ಶ್ರೀಲಂಕಾದಲ್ಲಿ ಭೀಕರ ಪ್ರವಾಹ.. ತುರ್ತು ಪರಿಸ್ಥಿತಿ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಒಂದು ವಾರದಿಂದ ಶ್ರೀಲಂಕಾದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಅದರಿಂದ ಉಂಟಾದ ಭೀಕರ ಪ್ರವಾಹ ಹಾಗೂ ಗುಡ್ಡಕುಸಿತದ ಪರಿಣಾಮವಾಗಿ ದ್ವೀಪರಾಷ್ಟ್ರವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇತ್ತೀಚೆಗೆ ಅಪ್ಪಳಿಸಿದ ದಿತ್ವಾಹ್ ಚಂಡಮಾರುತದ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ದುರಂತಕ್ಕೆ ಬಲಿಯಾದವರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ.

ವಿಪತ್ತು ನಿರ್ವಹಣಾ ಕೇಂದ್ರದ ಮಾಹಿತಿಯ ಪ್ರಕಾರ, ಈ ವಿನಾಶಕಾರಿ ಮಳೆಯಿಂದಾಗಿ ಇಲ್ಲಿಯವರೆಗೆ 123 ಜನರು ಸಾವನ್ನಪ್ಪಿದ್ದಾರೆ ಮತ್ತು 120ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಈ ಭೀಕರ ಪರಿಸ್ಥಿತಿಯ ಕಾರಣದಿಂದಾಗಿ ಶ್ರೀಲಂಕಾ ಸರ್ಕಾರವು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ.

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ಅನೇಕ ಕಡೆಗಳಲ್ಲಿ ಗುಡ್ಡಕುಸಿತ ಸಂಭವಿಸಿದ್ದು, ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಸುಮಾರು 4,36,995 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಸಾವಿನ ಸಂಖ್ಯೆ ಹೆಚ್ಚಾಗುವುದನ್ನು ತಡೆಯುವ ಉದ್ದೇಶದಿಂದ ಸರ್ಕಾರಿ ಕಚೇರಿಗಳು ಮತ್ತು ಶಾಲೆಗಳಿಗೆ ರಜೆ ನೀಡಲಾಗಿದೆ. ಸದ್ಯಕ್ಕೆ, ಪ್ರವಾಹ ಪರಿಸ್ಥಿತಿ ಇನ್ನೂ ಮುಂದುವರಿದಿದ್ದು, ನಾಪತ್ತೆಯಾದ 34 ಮಂದಿಗಾಗಿ ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಈ ದುರಂತದಿಂದ 61,000 ಕುಟುಂಬಗಳಿಗೆ ಸೇರಿದ 2 ಲಕ್ಷಕ್ಕೂ ಹೆಚ್ಚು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು DMC ದೃಢಪಡಿಸಿದೆ.

ಶ್ರೀಲಂಕಾದಲ್ಲಿನ ಈ ವಿನಾಶಕಾರಿ ಪರಿಸ್ಥಿತಿಯನ್ನು ಗಮನಿಸಿ, ಭಾರತವು ನೆರೆಹೊರೆ ಸಂಬಂಧದ ಭಾಗವಾಗಿ ತಕ್ಷಣವೇ ನೆರವು ನೀಡಲು ಮುಂದಾಗಿದೆ. ಭಾರತವು ಆಪರೇಷನ್ ಸಾಗರ ಬಂಧು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಇದರ ಭಾಗವಾಗಿ ತುರ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ.

ಅಗತ್ಯ ಆಹಾರ ಪದಾರ್ಥಗಳು ಮತ್ತು ನೈರ್ಮಲ್ಯ ಸಾಮಗ್ರಿಗಳನ್ನು ಹೊತ್ತ ಭಾರತೀಯ ವಾಯುಪಡೆಯ ಸಿ-130 ವಿಮಾನವು ಇಂದು ಮುಂಜಾನೆ 1.30ರ ಸುಮಾರಿಗೆ ಕೊಲಂಬೊದ ಬಂಡರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿತು. ಭಾರತೀಯ ಹೈಕಮಿಷನ್ ಮತ್ತು ಶ್ರೀಲಂಕಾ ವಾಯುಪಡೆಯ ಅಧಿಕಾರಿಗಳು ಜಂಟಿಯಾಗಿ ಪರಿಹಾರ ಸಾಮಗ್ರಿಗಳನ್ನು ಸ್ವೀಕರಿಸಿದರು.

ಈ ಮೊದಲು 2003ರಲ್ಲಿ ಶ್ರೀಲಂಕಾದಲ್ಲಿ ಭೀಕರ ಪ್ರವಾಹ ಉಂಟಾದಾಗ 254 ಜನರು ಸಾವನ್ನಪ್ಪಿದ್ದರು. ಪ್ರಸ್ತುತ ನಷ್ಟ ಮತ್ತು ಸಾವಿನ ಸಂಖ್ಯೆ ಆ ಹಿಂದಿನ ದುರಂತದ ನಂತರದ ಅತಿ ದೊಡ್ಡ ಮಟ್ಟದ ಹಾನಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !