ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವೇತನ ಪರಿಷ್ಕರಣೆ ಸಹಿತ ವಿವಿಧ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಮೇ 20ರಂದು ರಾಜ್ಯಾದ್ಯಂತ ಮುಷ್ಕರ ನಡೆಸಲು ಸಜ್ಜಾಗಿದ್ದ ಸಾರಿಗೆ ನೌಕರರ ಜೊತೆಗಿನ ಕಾರ್ಮಿಕ ಇಲಾಖೆ ನಡೆಸಿದ ಸಂಧಾನ ಸಭೆಯು ವಿಫಲಗೊಂಡಿದೆ. ಈ ಹಿನ್ನೆಲೆ ಮೇ 20 ರಂದು ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಸ್ತಬ್ಧಗೊಳ್ಳುವ ಆತಂಕ ಎದುರಾಗಿದೆ.
ಸಂಧಾನ ಸಭೆ ವಿಫಲ
ಕಳೆದ ಕೆಲವು ದಿನಗಳಿಂದ ಸಾರಿಗೆ ನೌಕರರ ಸಂಘಟನೆಗಳ ಮುಖಂಡರು ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳ ನಡುವೆ ಮಾತುಕತೆ ನಡೆಯುತ್ತಿದ್ದು, ಇಂದು ಕೂಡ ಸಂಧಾನ ಸಭೆಯು ನಡೆದರೂ ಯಾವುದೇ ತಾರ್ಕಿಕ ಅಂತ್ಯ ಕಾಣದೆ ಮುಕ್ತಾಯಗೊಂಡಿದೆ.
ಸಿಎಂ ನೇತೃತ್ವದ ಸಭೆಗೆ ಪಟ್ಟು
ಕಾರ್ಮಿಕ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಮಾತುಕತೆ ನಡೆಸಿದರೂ, ಯಾವುದೇ ಮನವೊಲಿಕೆಗೂ ಒಪ್ಪದ ಸಾರಿಗೆ ಮುಖಂಡರು, ಸಿಎಂ ಹಾಗು ಸಾರಿಗೆ ಸಚಿವರ ನೇತೃತ್ವದಲ್ಲಿ ಸಭೆ ನಡೆಸಲು ಆಗ್ರಹಿಸಿದ್ದಾರೆ.
ಸರ್ಕಾರದ ನಡೆಯತ್ತ ಮುಖಂಡರ ದೃಷ್ಟಿ
ಸಾರಿಗೆ ಸಚಿವರು, ಸಿಎಂ ಅಧ್ಯಕ್ಷತೆಯ ಸಭೆಗೆ ನಾವು ಸಿದ್ದರಿದ್ದೇವೆ. ಮುಂದಿನ ಸೂಚನೆಗಾಗಿ ಜಂಟಿ ಕ್ರಿಯಾ ಸಮಿತಿಯು ಕಾಯುತ್ತಿದೆ. ಆದರೆ ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ನೌಕರರ ಮುಖಂಡರು ಒತ್ತಾಯಿಸಿದ್ದಾರೆ. ಹೀಗಾಗಿ ಸರ್ಕಾರದ ನಿರ್ಧಾರದ ಆಧಾರದ ಮೇಲೆ ಮುಷ್ಕರದ ಅಂತಿಮ ಸ್ವರೂಪ ನಿರ್ಧಾರವಾಗಲಿದೆ ಎಂದು ಮುಖಂಡರು ತಿಳಿಸಿದ್ದಾರೆ.



