ಹೊಸದಿಗಂತ ವರದಿ, ಮದ್ದೂರು :
ಇಬ್ಬರು ಅಪರಿತ ವ್ಯಕ್ತಿಗಳು ನಿವೃತ್ತ ಬ್ಯಾಂಕ್ ನೌಕರರ ಪಿಂಚಣಿ ಹಣವನ್ನು ದೋಚಿರುವ ಘಟನೆ ಪಟ್ಟಣದಲ್ಲಿ ಗುರುವಾರ ಜರುಗಿದೆ.
ಸ್ಟೇಟ್ ಬ್ಯಾಂಕ್ ಇಂಡಿಯಾ ಮದ್ದೂರು ಶಾಖೆಯಲ್ಲಿ ಕ್ಯಾಷಿಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶ್ರೀನಿವಾಸರಾವ್ ಎಂಬುವರು ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟಿದ್ದ 1.50 ಲಕ್ಷ ರೂ.ಗಳನ್ನು ಅಪರಿಚಿತ ವ್ಯಕ್ತಿಗಳು ಅಪಹರಿಸಿ ಪರಾರಿಯಾಗಿದ್ದಾರೆ.
ಶ್ರೀನಿವಾಸರಾವ್ ನಿವೃತ್ತರಾದ ನಂತರ ಬೆಂಗಳೂರಿನಲ್ಲಿ ತಮ್ಮ ಮಕ್ಕಳೊಂದಿಗೆ ವಾಸವಾಗಿದ್ದರು. ಪಿಂಚಣಿ ಹಣ ಡ್ರಾ ಮಾಡಲು ಗುರುವಾರ ಬ್ಯಾಂಕಿಗೆ ಬಂದಿದ್ದ ಶ್ರೀನಿವಾಸರಾವ್ ಮಧ್ಯಾಹ್ನ 12.45ರ ಸುಮಾರಿಗೆ ತಮ್ಮ ಖಾತೆಯಲ್ಲಿದ್ದ ಒಂದೂವರೆ ಲಕ್ಷ ರೂ.ಗಳನ್ನು ಡ್ರಾ ಮಾಡಿದ ನಂತರ ತಮ್ಮ ಆ್ಯಕ್ಟೀವ್ ಹೋಂಡಾ ಸ್ಕೂಟರ್ ಡಿಕ್ಕಿಯಲ್ಲಿಟ್ಟುಕೊಂಡು ಮನೆಗೆ ತೆರಳುವ ಮಾರ್ಗ ಮಧ್ಯೆ ಶ್ರೀನಿವಾಸ ಬೇಕರಿಯಲ್ಲಿ ಹಣ್ಣುಗಳನ್ನು ಖರೀದಿ ಮಾಡಲು ಹೋಗಿದ್ದಾರೆ.
ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಇಬ್ಬರು ಅಪರಿಚಿತ ವ್ಯಕ್ತಿಗಳು ಸ್ಕೂಟರ್ ಡಿಕ್ಕಿಯಲ್ಲಿದ್ದ ಹಣವನ್ನು ಅಪಹರಿಸಿ ಪರಾರಿಯಾಗಿದ್ದಾರೆ.
ನಂತರ ಶ್ರೀನಿವಾಸರಾವ್ ಮನೆಗೆ ತೆರಳಿದಾಗ ಹಣ ಕಳುವಾಗಿರುವುದು ಗೊತ್ತಾಗಿದೆ. ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳಿಗಾಗಿ ಕ್ರಮ ಕೈಗೊಂಡಿದ್ದಾರೆ.
ಇವರು ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಬರುವಾಗ ಅಪರಿಚಿತ ವ್ಯಕ್ತಿಗಳಿಬ್ಬರು ಹಿಂಭಾಲಿಸಿಕೊಂಡು ಹೋಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದುಘಿ, ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.