ಹೊಸದಿಗಂತ ವರದಿ, ಮಡಿಕೇರಿ:
ಕೊಡಗಿನಲ್ಲೂ ಉಗ್ರ ಚಟುವಟಿಕೆಗಳಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ಹೇಳಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಬಳಿಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರ್ಕಾರ ಹೈ ಅಲರ್ಟ್ ಮಾಡಿದೆ. ಆದರೆ ಕೊಡಗಿನಲ್ಲೂ ಉಗ್ರ ಚಟುವಟಿಕೆಗಳಿರುವುದನ್ನು ತಳ್ಳಿಹಾಕಲಾಗದು. ಕೊಡಗಿನಲ್ಲಿ ಉಗ್ರ ಚಟುವಟಿಕೆಗಳಿಗೆ ಅದರದ್ದೇ ಪ್ರತ್ಯೇಕ ಪ್ರದೇಶಗಳಿದ್ದು, ಅದರ ಬಗ್ಗೆ ಕೂಡಾ ಮಾಹಿತಿ ಇದೆ ಮಡಿಕೇರಿ ತಾಲೂಕು ಸುತ್ತಮುತ್ತ ಮತ್ತು ವೀರಾಜಪೇಟೆ ತಾಲೂಕಿನಲ್ಲೂ ಅಂತಹ ಪ್ರದೇಶಗಳಿದ್ದು, ಈ ಕುರಿತು ಪೊಲೀಸ್ ಇಲಾಖೆ ಎಚ್ಚರ ವಹಿಸಿದೆ ಎಂದು ನುಡಿದರು.
ವ್ಯಾಪಾರಕ್ಕೆ ನಿಷೇಧ-ಸ್ವಾಗತ: ಇತ್ತೀಚಿನ ದಿನಗಳಲ್ಲಿ ದೇಶದ್ರೋಹಿ ಕೆಲಸಗಳಲ್ಲಿ ಒಂದು ವರ್ಗದ ಜನ ತೊಡಗಿದ್ದಾರೆ. ಒಂದು ಕೋಮಿನ ಜನರು ಆ ಕೆಲಸದಲ್ಲಿ ಭಾಗಿಯಾಗುತ್ತಿದ್ದಾರೆ. ಎಲ್ಲಾ ಕಡೆ ಪ್ರಾಣ ಹಾನಿ ಮಾಡುವ ಕೆಲಸಗಳು ನಡೆಯುತ್ತಿವೆ. ಹೀಗಾಗಿ ಹಿಂದೂಗಳಲ್ಲಿ ಜಾಗೃತಿಯಾಗುತ್ತಿದ್ದು, ಇದು ಒಳ್ಳೆಯ ಬೆಳವಣಿಗೆ. ಇದರ ಭಾಗವಾಗಿಯೇ ಕೊಡಗಿನ ಹರಿಹರ ಸುಬ್ರಹ್ಮಣ್ಯ ದೇವಾಲಯದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ದೇಶದಲ್ಲಿ ವಿಶೇಷವಾಗಿ ಒಂದು ಕೋಮಿನ ಜನರು ಶಾಂತಿ ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯ ಎಲ್ಲೆಡೆ ಊರಿನ ಜಾತ್ರೆ, ವಾರ್ಷಿಕೋತ್ಸವಗಳು ನಡೆಯುತ್ತವೆ. ಹಾಗಾಗಿ ಕೊಡಗಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ ಈ ನಿಟ್ಟಿನಲ್ಲಿ ಜನರೇ ಜಾಗೃತರಾಗಿ ಅನ್ಯಕೋಮಿನ ಜನರಿಗೆ ವ್ಯಾಪಾರಕ್ಕೆ ಅವಕಾಶ ನೀಡುತ್ತಿಲ್ಲ. ಅದನ್ನು ನಾನು ಸ್ವಾಗತ ಮಾಡುತ್ತೇನೆ ಎಂದ ಅವರು, ಇದು ಎಲ್ಲಾ ಕಡೆ ಆಗಬೇಕಾಗಿದೆ ಎಂದು ಹೇಳಿದರು.
ಕೊಡಗಿಗೆ ಬರಲು ಬಿಡಬೇಡಿ: ಅನ್ಯಕೋಮಿನವರು ಕೂಡಾ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಉಗ್ರ ತರಬೇತಿಗಳಿಗೆ ಹೋಗಿ ಬರುವವರನ್ನು ಅನ್ಯಕೋಮಿನ ಯುವಕರು ಜಿಲ್ಲೆಯೊಳಗೆ ಬರಲು ಬಿಡಬೇಡಿ ಎಂದು ಬೋಪಯ್ಯ ಸಲಹೆ ಮಾಡಿದರು.