ಹೊಸದಿಗಂತ ವರದಿ, ಶಿವಮೊಗ್ಗ:
ರಾಜ್ಯದಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ ಬಿಜೆಪಿ ರಾಜ್ಯ ಪ್ರಶಿಕ್ಷಣ ವರ್ಗದಲ್ಲಿ ಮಾತನಾಡಿ, ಪಂಡಿತ ದೀನದಯಾಳು ಅವರ ಮಾರ್ಗದರ್ಶನವನ್ನು ಪಕ್ಷ ಅನುಸರಿಸುತ್ತಿದೆ. ಮುಂದುವರಿದುವ ಸಮಾಜದಲ್ಲಿ ಸುಧಾರಣೆ ತರುವ ಪ್ರಯತ್ನಗಳು ನಡೆಯುತ್ತಿವೆ. ಏಕರೂಪ ನಾಗರೀಕ ಸಂಹಿತೆ ಜಾರಿಯೂ ಇದರಲ್ಲಿ ಒಂದು. ಅದರ ಬಗ್ಗೆ ಗಂಭೀರ ಚರ್ಚೆ ರಾಜ್ಯದಲ್ಲೂ ನಡೆದಿದೆ ಎಂದರು.
ಸಮಾಜದಲ್ಲಿ ಸುಧಾರಣೆ ತರುವ ಪ್ರಯತ್ನವನ್ನು ಬಿಜೆಪಿ ಹಿಂದಿನಿಂದಲೂ ಮಾಡಿಕೊಂಡು ಬಂದಾಗ ಪ್ರತಿಪಕ್ಷಗಳಿಂದ ಟೀಕೆಗಳು ಬಂದಿರುವುದೇ ಹೆಚ್ಚು. ಆದರೆ ಪಕ್ಷದ ಜನಪರ ಆಲೋಚನೆಗಳ ಜಾರಿಯಲ್ಲಿ ನಾವೆಂದೂ ಹಿಂದೇಟು ಹಾಕುವುದಿಲ್ಲ ಎನ್ನುವ ಮೂಲಕ ಏಕರೂಪ ನಾಗರಿಕ ಸಂಹಿತೆ ಜಾರಿಯ ಸುಳಿವು ನೀಡಿದರು.