ಹೊಸದಿಗಂತ ವರದಿ ಹುಬ್ಬಳ್ಳಿ:
ನೈರುತ್ಯ ರೈಲ್ವೆಯು 2018ರಲ್ಲಿ ನಡೆಸಿದ್ದ ರೈಲ್ವೆ ಟೆಕ್ನಿಷಿಯನ್ ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ನೇಮಕಾತಿ ಪತ್ರ ನೀಡಬೇಕು ಎಂದು ಆಗ್ರಹಿಸಿ, ನಗರದ ಗದಗ ರಸ್ತೆಯಲ್ಲಿರುವ ರೈಲ್ ಸೌಧದ ಎದುರು ಅಭ್ಯರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ದೇಶದ ವಿವಿಧ ಭಾಗಗಳಿಂದ ಬಂದಿದ್ದ ಅಭ್ಯರ್ಥಿಗಳು ‘ನೇಮಕಾತಿ ಪತ್ರ ಬೇಗ ಕೊಡಿ’ ಎಂದು ಘೋಷಣೆ ಕೂಗಿದರು. ನಾಲ್ಕು ವರ್ಷಗಳಿಂದ ವಿಳಂಬ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
320 ಟೆಕ್ನಿಷಿಯನ್ ಗಳ ಜೊತೆಗೆ, ಲೋಕೋಪೈಲಟ್ ಗಳ ನೇಮಕಾತಿಗೂ ಪರೀಕ್ಷೆ ನಡೆಸಲಾಗಿತ್ತು. ಲೋಕೋಪೈಲಟ್ ಹುದ್ದೆಗೆ ನೇಮಕವಾದವರಿಗೆ ಈಗಾಗಲೇ ನೇಮಕಾತಿ ಪತ್ರ ನೀಡಿ, ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೆ, ಟೆಕ್ನಿಷಿಯನ್ ಅಭ್ಯರ್ಥಿಗಳ ವಿಷಯದಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.