– ಶಿವಲಿಂಗಯ್ಯ ಹೊತಗಿಮಠ
ಲಕ್ಷ್ಮೇಶ್ವರ: ತರಕಾರಿ ಬೇಕಾ ತರಕಾರಿ… ತಾಜಾ ಕಾಯಿಪಲ್ಲೆ ಸರ್ ಬನ್ನಿ ಬನ್ನಿ ಬೀನ್ಸ್ 30 ರೂ., ಈರುಳ್ಳಿ 60 ರೂ. ಮೆಣಸಿನಕಾಯಿ 10 ರೂ. ಕೋಸುಗಡ್ಡೆ 20 ರೂ. ಖಾರಾ, ಚುರಮರಿ, ಬಜಿ, ಮಿರ್ಚಿ ಬೇಕಾ ಬನ್ನಿ ಬನ್ನಿ ಹೀಗೆ ಕೂಗುತ್ತಾ ಮಾರಾಟ ಮಾಡಿದ್ದು ವ್ಯಾಪಾರಸ್ಥರಲ್ಲ, ಬದಲಿಗೆ ಶಾಲೆಯ ಮಕ್ಕಳು. ಬಹಳ ಉತ್ಸಾಹದಿಂದ ತರಕಾರಿ, ಹೂವು ಹಣ್ಣು, ಬಟ್ಟೆ ಇತ್ಯಾದಿ ಮಾರಾಟ ಮಾಡುವ ಮೂಲಕ ಭರ್ಜರಿ ವ್ಯಾಪಾರ ಮಾಡಿದರು.
ಒಂದು ದಿನದ ಮಟ್ಟಿಗೆ ಪಟ್ಟಣದ ಬಹುತೇಕ ಶಾಲೆಗಳಲ್ಲಿ ಸಂತೆಯ ವಾತಾವರಣ ನಿರ್ಮಾಣವಾಗಿತ್ತು. ಶಾಲೆಗಳಲ್ಲಿ ಮಕ್ಕಳಿಗೆ ಹಮ್ಮಿಕೊಂಡಿದ್ದ ಮೆಟ್ರಿಕ್ ಮೇಳದಲ್ಲಿ ಸಂತೆ ಮಾಡುವುದರಲ್ಲಿ ನಾವು ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಮಕ್ಕಳು ವ್ಯಾಪಾರ ಮಾಡಿದರು. ಈ ಶಾಲೆಯ ಮಕ್ಕಳೆಲ್ಲಾ ತರಕಾರಿ ಮಾರಾಟ ಮಾಡುವ ರೈತರಾಗಿದ್ದರು. ಪೋಷಕರು ಹಾಗೂ ಶಾಲೆಯ ಅಕ್ಕಪಕ್ಕದ ನಿವಾಸಿಗಳೆಲ್ಲಾ ಗ್ರಾಹಕರಾಗಿದ್ದರು.
ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹರದಗಟ್ಟಿ ಗ್ರಾಮದ ಮಕ್ಕಳ ಸಂತೆಯೂ ಎಲ್ಲರ ಗಮನ ಸೆಳೆಯಿತು.
ಎಲ್ಲ ಶಾಲೆಗಳಲ್ಲಿ ಜನರು ಮಾರುಕಟ್ಟೆಗೆ ತರಕಾರಿ ಖರೀದಿಗೆ ತೆರಳದೇ, ಶಾಲೆಗೆ ಬಂದು ತಮ್ಮ ಮಕ್ಕಳ ಬಳಿ ತರಕಾರಿ ಖರೀದಿ ಮಾಡಿರುವುದು ವಿಶೇಷವಾಗಿತ್ತು.
ತರಕಾರಿ ಮಾರಾಟ ಮಾಡಿದ ಮಕ್ಕಳು ಗ್ರಾಹಕರ ಬಳಿ ಚಿಲ್ಲರೆಯೂ ಬಿಡದೇ, ಹಣ ಪಡೆದು ವ್ಯಾಪಾರ-ವಹಿವಾಟು ನಡೆಸಿದ್ದು, ಪದೇ ಪದೆ ಕೂಗಿ ತಮ್ಮ ತಮ್ಮ ವಸ್ತುಗಳನ್ನು ಕೊಳ್ಳುವಂತೆ ಹೇಳುತ್ತಿರುವುದು ಕಂಡು ಬಂದಿತು.ಗ್ರಾಹಕರು ಅಗತ್ಯ ತರಕಾರಿಗಳನ್ನು ಚೌಕಾಸಿ ಮಾಡಿ ಖರೀದಿ ಮಾಡಿದರು.