ಹೊಸದಿಗಂತ ವರದಿ,ಶಿವಮೊಗ್ಗ:
ತಾಲೂಕಿನ ಮತ್ತೂರು-ಹೊಸಳ್ಳಿಯ ಹಿರಿಯ ಗಮಕ ಕಲಾವಿದ, ಪದ್ಮಶ್ರೀ ಪುರಸ್ಕೃತ ಎಚ್.ಆರ್. ಕೇಶವಮೂರ್ತಿ (88) ಬುಧವಾರ ಅಸ್ತಂಗತರಾಗಿದ್ದಾರೆ.
ಅವರಿಗೆ 2021ನೇ ಸಾಲಿನ ಕೇಂದ್ರ ಸರ್ಕಾರದ ಪದ್ಮಶ್ರೀ ಲಭಿಸಿದೆ. 88 ವರ್ಷದ ಕೇಶವಮೂರ್ತಿ ಅವರಿಗೆ ಕಲಾ ವಿಭಾಗದಲ್ಲಿ ಶ್ರೇಷ್ಠ ಪುರಸ್ಕಾರ ಸಂದಿದೆ.
ಗಮಕ ಕ್ಷೇತ್ರದಲ್ಲಿ ಪರಿಣಿತರಾಗಿದ್ದು ಹೊಸಹಳ್ಳಿಯಲ್ಲಿರುವ ಗಮಕ ಕಲಾ ಪರಿಷತ್ನಿಂದ (ಗಮಕ ಆರ್ಟ್ ಅಕಾಡೆಮಿ) ಲಭ್ಯವಿರುವ ಗಮಕದ ಧ್ವನಿ ಹಾಡುಗಳಲ್ಲಿ ಕಾಣಿಸಿಕೊಂಡ ಕಲಾವಿದರಲ್ಲಿ ಕೇಶವಮೂರ್ತಿ ಒಬ್ಬರು.
ಶಿವಮೊಗ್ಗ ಜಿಲ್ಲೆಯ ಮತ್ತೂರು-ಹೊಸಹಳ್ಳಿ ಗ್ರಾಮ ಗಮಕ ಕಾರ್ಯಕ್ರಮದ ಚಟುವಟಿಕೆಯಿಂದ ಗಮಕ ಗ್ರಾಮಗಳು ಎನಿಸಿವೆ. ಎಚ್.ಆರ್.ಕೇಶವಮೂರ್ತಿ, ಮತ್ತೂರು ಕೃಷ್ಣಮೂರ್ತಿ, ಮಾರ್ಕಂಡೇಯ ಅವಧಾನಿಗಳು ಅವರ ಗಮಕ ಕಲೆಗೆ ನೀಡಿದ ಸೇವೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ.
ಗಮಕ ಕಲಾ ಸಾ‘ಕರಿಗೆ ನೀಡಲಾಗುವ ಕುಮಾರವ್ಯಾಸ ಪ್ರಶಸ್ತಿಯು ಗಮಕ ವಾಚಕ ಹೊಸಹಳ್ಳಿ ಕೇಶವಮೂರ್ತಿ ಅವರಿಗೆ ಮೊದಲ ಬಾರಿಗೆ ಒಲಿದಿತ್ತು. ಜತೆಗೆ ವಾಚನದಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಸಾಕಷ್ಟು ರಾಜ್ಯಮಟ್ಟದ ಪ್ರಶಸ್ತಿಗಳೂ ಅವರನ್ನು ಅರಸಿ ಬಂದಿವೆ.
ವೇದಬ್ರಹ್ಮ ರಾಮಸ್ವಾಮಿ ಶಾಸಿ ಮತ್ತು ಲಕ್ಷ್ಮೀದೇವಪ್ಪ ದಂಪತಿ ಪುತ್ರರಾದ ಕೇಶವಮೂರ್ತಿ ಅವರು 1934ರ ಫೆಬ್ರವರಿ 22ರಂದು ಹೊಸಹಳ್ಳಿಯಲ್ಲಿ ಜನಿಸಿದ್ದರು. ಬಾಲ್ಯದಿಂದಲೂ ತಂದೆಯಂತೆಯೇ ಗಮಕ ಕಲೆ ಬಗ್ಗೆ ಆಸಕ್ತರಾದ ಅವರು ಗಮಕ ಕಲೆಯನ್ನು ಉಳಿಸಿ ಬೆಳೆಸಲು ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು.
ಇವರ ಅಂತ್ಯಕ್ರಿಯೆ ನಾಳೆ ನಡೆಯಲಿದೆ.