ಹೊಸ ದಿಗಂತ ವರದಿ, ಮಡಿಕೇರಿ:
ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದು, ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಿದ ಪ್ರಕರಣ ಇಲ್ಲಿಗೆ ಸಮೀಪದ ಬಿಳಿಗೇರಿ ಗ್ರಾಮದಲ್ಲಿ ನಡೆದಿದೆ.
ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದಲ್ಲಿ ಬುಧವಾರ ಸಂಜೆ ತೀರ್ಥ ಎಂಬವರ ಮೇಲೆ ನಿಶ್ಚಲ್ ಎಂಬಾತ ಗುಂಡು ಹಾರಿಸಿದ್ದಾಗಿ ಹೇಳಲಾಗಿದ್ದು, ಈ ಸಂದರ್ಭ ತೀರ್ಥ ಚಲಾಯಿಸುತ್ತಿದ್ದ ಜೀಪಿಗೆ ಗುಂಡು ತಗುಲಿದೆ. ಜೀಪಿನ ಸೀಟು ಮತ್ತು ಜೀಪ್ ಬಾಡಿಯನ್ನು ಸೀಳಿ ಗುಂಡು ಹಾರಿಹೋಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಆಸ್ತಿ ವಿಷಯದಲ್ಲಿ ಇವರಿಬ್ಬರ ಕುಟುಂಬದ ನಡುವೆ ಕಲಹ ನಡೆಯುತ್ತಿತ್ತೆನ್ನಲಾಗಿದ್ದು, ಗುಂಡೇಟು ಪ್ರಕರಣದ ಹಿನ್ನೆಲೆಯಲ್ಲಿ ಗುರುವಾರ ಮತ್ತೆ ಎರಡು ಕುಟುಂಬಗಳ ನಡುವೆ ಹೊಡೆದಾಟವಾಗಿದ್ದು, ಈ ಸಂದರ್ಭ ನಿಶ್ಚಲ್ ನ ಕೈ ಮುರಿದಿದ್ದು, ತಲೆಗೂ ಗಂಭೀರ ಗಾಯಗಳಾಗಿವೆ.
ಗಾಯಗೊಂಡಿರುವ ಇಬ್ಬರನ್ನೂ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ಮಡಿಕೇರಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.