ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜೆಡಿಎಸ್ನ ಪಂಚರತ್ನ ರಥಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಹೋದ ಕಡೆಯಲ್ಲೆಲ್ಲಾ ಮಾಜಿ ಸಿಎಂ ಎಚ್. ಡಿ.ಕುಮಾರಸ್ವಾಮಿ ಅವರನ್ನು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸುತ್ತಿದ್ದಾರೆ. ದಾರಿಯುದ್ದಕ್ಕೂ ಪ್ರತಿ ಗ್ರಾಮದಲ್ಲೂ ನೂರಾರು ಬಗೆಯ ವಿಶೇಷ ಬೃಹತ್ ಹಾರಗಳನ್ನು ಹಾಕಿ ಅಭಿಮಾನ ಮೆರೆಯುತ್ತಿದ್ದು, ಇದೀಗ ಈ ಯಾತ್ರೆ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ.
ಕೋಲಾರದ ಮುಳಬಾಗಿಲುನಿಂದ ಆರಂಭವಾದ ಯಾತ್ರೆ ಇದೀಗ ತುಮಕೂರು ಜಿಲ್ಲೆಯ ಕುಣಿಗಲ್ಗೆ ಆಗಮಿಸಿದೆ. ಚಕೋತಾ ಹಣ್ಣಿನ ಬೃಹತ್ ಹಾರ, ಕಬ್ಬಿನ ಜಲ್ಲೆಯ ಹಾರ, ಬೆಲ್ಲದ ಹಾರ, ಕೊಬ್ಬರಿ ಹಾರ, ಕೊಬ್ಬರಿ ಹಾರ, ಸ್ಕೂಲ್ ಬ್ಯಾಗ್ ಹಾರ, ನೇಗಿಲು ಹಾರ, ಕಾಯಿನ್ ಹಾರ, ಹೊಂಬಾಳೆ ಹಾರ, ಜೆಡಿಎಸ್ ಚಿಹ್ನೆಯ ಹಾರ, ಮಣ್ಣಿನ ಹಾರ, ಕಿರೀಟ ಹಾರ… ಅಬ್ಬಬ್ಬಾ ದಾರಿಯುದ್ದಕ್ಕೂ ವಿಶೇಷ ರೀತಿಯ ವಿಭಿನ್ನ ಹಾರಗಳದ್ದೇ ಸದ್ದು. ಕುಮಾರಸ್ವಾಮಿ ಅವರನ್ನ ಅಭಿಮಾನಿಗಳು ವಿಶೇಷ ರೀತಿಯಲ್ಲಿ ಸ್ವಾಗತಿಸುತ್ತಾ, ತಮ್ಮ ಊರಿನ ಪ್ರಮುಖ ಬೆಳೆಗಳನ್ನೇ ಹಾರವಾಗಿ ಹಾಕುತ್ತಾ ತಮ್ಮೂರಿನ ಸೊಗಡನ್ನು ಪರಿಚಯಿಸುತ್ತಿದ್ದಾರೆ.
ಪಂಚರತ್ನ ಯಾತ್ರೆಯಲ್ಲಿ ಈಗಾಗಲೇ ಹಾರಗಳ ಸಂಖ್ಯೆ 500ರ ಗಡಿ ದಾಟಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಹಾರಗಳನ್ನ ಹಾಕಿ ಸ್ವಾಗತ ಮಾಡಿರೋದು. ರೈತರೇ ಹಾರಗಳನ್ನ ತಯಾರಿಸಿದ್ದಾರೆ. ಇದು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿದ್ದು, ಖುದ್ದು ಕುಮಾರಸ್ವಾಮಿ ಅವರಿಗೆ ಮೆಡಲ್ಗಳನ್ನು ಕೊಟ್ಟು ಗೌರವಿಸಲಾಗಿದೆ.