ದಿಗಂತ ವರದಿ ವಿಜಯಪುರ:
ನಡೆದಾಡುವ ದೇವರಾದ ಸಿದ್ದೇಶ್ವರ ಶ್ರೀಗಳ ಅಂತಿಮ ದರುಶನಕ್ಕೆ ಜನಸಾಗರ ಹರಿದು ಬರುತ್ತಿದ್ದು, ಭಕ್ತರ ದುಃಖ ಮುಗಿಲು ಮುಟ್ಟಿದೆ ಇಲ್ಲಿನ ಸೈನಿಕ ಶಾಲೆಯಲ್ಲಿ ಶ್ರೀಗಳ ಅಂತಿಮ ದರುಶನದ ವ್ಯವಸ್ಥೆ ಮಾಡಲಾಗಿದೆ.
ಶತಮಾನ ಕಂಡ ಶ್ರೇಷ್ಠ ಸಂತ, ಆಧ್ಯಾತ್ಮಿಕ ಮೇರು ಶಿಖರದ ಮಹಾಸ್ವಾಮಿ ಸಿದ್ದೇಶ್ವರ ಶ್ರೀಗಳು ತಮ್ಮ ಸರಳ ನಡೆ- ನುಡಿ, ಪ್ರವಚನಗಳಿಂದ ಭಕ್ತರ ಮನಸೂರೆಗೊಂಡವರು. ಸದಾ ಸನ್ಮಾರ್ಗದ ಸಂದೇಶ ಸಾರುತ್ತಿದ್ದ ಶ್ರೀಗಳ ಪ್ರವಚನ ಕೇಳಲು ನಾಡಿನಾದ್ಯಂತ ಭಕ್ತರು ಹಾತೊರೆಯುತ್ತಿದ್ದರು. ಇಂದು ಭಕ್ತರಲ್ಲಿ ಶ್ರೀಗಳ ಅಗಲಿಕೆಯ ನೋವು ಮಡುಗಟ್ಟವಂತಾಗಿದೆ.
ಇಲ್ಲಿನ ಸೈನಿಕ ಶಾಲೆಯ ರಸ್ತೆಯಲ್ಲಿ ಎತ್ತನೋಡಿದರತ್ತ ಜನಸ್ತೋಮವೇ ಕಂಡು ಬರುತ್ತಿದೆ. ಜಿಲ್ಲೆಯ ವಿವಿಧ ತಾಲೂಕು ಸೇರಿದಂತೆ, ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ, ಕಲಬುರಗಿ, ಹುಬ್ಬಳ್ಳಿ, ಧಾರವಾಡ, ಗದಗ ಹಾಗೂ ಮಹಾರಾಷ್ಟ್ರದ ಸಾಂಗ್ಲಿ, ಜತ್ತ, ಸೊಲ್ಲಾಪುರ, ಅಕ್ಕಲಕೋಟ, ಪುಣೆ ಸೇರಿದಂತೆ ನಾನಾ ಭಾಗಗಳಿಂದ ಶ್ರೀಗಳ ಅಂತಿಮ ದರುಶನಕ್ಕೆ ಭಕ್ತರು ತಂಡೊಪ ತಂಡವಾಗಿ ಹರಿದು ಬರುತ್ತಿದ್ದಾರೆ. ಶ್ರೀಗಳ ಪ್ರಾರ್ಥಿವ ಶರೀರ ಕಂಡು ಭಕ್ತರ ಕಣ್ಣಲ್ಲಿ ನೀರಾಡುತ್ತಿದ್ದು, ಮನಸ್ಸು ಭಾರಮಾಡಿಕೊಂಡು ತೆರಳುತ್ತಿರುವುದು ಮನಕಲುಕುವಂತಾಗಿದೆ.