ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ಮಾಜಿ ಸಿಎಂ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುರಿತು ಮಾತನಾಡಿರುವ ಮಾತು ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ನಾಲಿಗೆ ಹರಿಬಿಟ್ಟಿದ್ದಾರೆ. ಸಿಎಂ ಬೊಮ್ಮಾಯಿಯವರು ಮೋದಿ ಮುಂದೆ ನಾಯಿಮರಿ ರೀತಿ ಇರುತ್ತಾರೆ ಎಂದಿರುವ ವಿಚಾರಕ್ಕೆ ಸಚಿವ ಶ್ರೀರಾಮುಲು ಕೆಂಡಾಮಂಡಲರಾಗಿದ್ದು
ಇಂದು ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಸಾರಿಗೆ ಸಚಿವ ಬಿ ಶ್ರೀರಾಮುಲು, ಸಿದ್ದರಾಮಯ್ಯ ಕೂಡ ಸಿಎಂ ಆಗಿದ್ದಂಥವರು, ಮಾಜಿ ಮುಖ್ಯಮಂತ್ರಿಯಾಗಿ ಮತ್ತು ವಿರೋಧ ಪಕ್ಷದ ನಾಯಕರಾದ ಅವರು ಮಾತನಾಡಿರುವ ಮಾತು ತಮ್ಮ ಘನತೆಗೆ ತಕ್ಕುದಲ್ಲ. ಇಂತಹ ಮಾತುಗಳನ್ನಾಡಿ ತಮ್ಮ ಸಂಸ್ಕಾರವನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದ್ದಾರೆ.
ನಾವು ಕೂಡ ಸೋನಿಯಾ ಗಾಂಧಿ ಮುಂದೆ ನೀವು ಬೆಕ್ಕು, ಇಲಿ, ಜಿರಲೆ ಹಾಗೆ ಇರುತ್ತೀರಿ ಅಂತ ನಾವು ಹೇಳಬಹುದು, ಅದರೆ ಅಂತಹ ಮಾತುಗಳಾಡುವುದು ನಮ್ಮ ಸಂಸ್ಕೃತಿಯಲ್ಲ ಎಂದು ರಾಮುಲು ಕುಟುಕಿದರು. ಸಿದ್ದರಾಮಯ್ಯನವರು ಸಾರ್ವಜನಿಕವಾಗಿ ಮುಖ್ಯಮಂತ್ರಿಗಳ ಕ್ಷಮೆ ಕೇಳಬೇಕು ಎಂದು ಶ್ರೀರಾಮುಲು ಆಗ್ರಹಿಸಿದ್ದಾರೆ.