-ಮಹಾಂತೇಶ ಕಣವಿ
ಹಾವೇರಿ: ಅಖಿಲ ಭಾರತ 86ನೇ ಸಾಹಿತ್ಯ ಸಮ್ಮೇಳನದಲ್ಲಿ ಗಮನ ಸೆಳೆಯುತ್ತಿರುವ ಹಲವು ಮಳಿಗೆಗಳ ಪೈಕಿ ಬೆಂಗಳೂರಿನ ‘ಕರ್ಣಾಟ ಬಲ’ವೂ ಒಂದು.
ಈ ಸಂಸ್ಥೆ ಕನ್ನಡ ನಾಡು ಆಳಿದ ರಾಜ ಮನೆತನ, ಲಾಂಛನ ಬಗ್ಗೆ ವಿನೂತನವಾಗಿ ‘ಟಿ ಶರ್ಟ್’ ರೂಪಿಸಿ ಜನರಿಗೆ ತಲುಪಿಸುತ್ತಿದೆ.
‘ಕಾವೇರಿಯಿಂದ ಆ ಗೋದಾವರಿವರಂ ಇರ್ಪ ನಾಡದಾ ಕನ್ನಡದೋಳ್’ ಎಂಬ ಕವಿವಾಣಿ ಮೂಲಕ ‘ಕನ್ನಡ ನಾಡಿನ ವಿಸ್ತಾರದ ಬಗ್ಗೆ ಪಠ್ಯ ಹಾಗೂ ಮತ್ತೊಬ್ಬರ ಬಾಯಿಂದ ಕೇಳುತ್ತಲೇ ಬಂದಿರುವುದು ಈಗ ಹಳೇ ವಿಷಯವೂ ಹೌದು.
ಬಹುತೇಕರಿಗೆ ಕನ್ನಡ ರಾಜ ಮನೆತಗಳ ಬಗ್ಗೆ ಮಾಹಿತಿಯೇ ಇಲ್ಲ. ಕೆಲವರಿಗೆ ಇದ್ದರೂ, ಬೆರಳಣಿಕೆಯಷ್ಟು ಮಾತ್ರವೇ ಗೊತ್ತು. ಇನ್ನೂ ಹೊಸ ಪೀಳಿಗೆಯ ಕರ್ಣಗಳಿಗೆ ಈ ಮನೆತನಗಳ ಹೆಸರು ಕೂಡ ಹೊಸದಾಗಿ ಕೇಳಿಸಿರುವುದು ಸತ್ಯ.
ನಮ್ಮ ನವ ತಲೆಮಾರು ಕನ್ನಡದ ರಾಜ ಮನೆತನಗಳನ್ನು ಮರೆತು ಹೊಗುವ ಹೊತ್ತಿನಲ್ಲಿ ಬೆಂಗಳೂರಿನ ‘ಕರ್ಣಾಟ ಬಲ” ಎಂಬ ತಂಡ ಇದೇ ಮೊದಲ ಬಾರಿಗೆ ಸಮ್ಮೇಳನದಲ್ಲಿ ಕನ್ನಡ ರಾಜ ಮನೆತಗಳನ್ನು ಪರಿಯಿಸುವ ಕೆಲಸ ಶ್ಲಾಘನೀಯ.
ಕ್ರಿ.ಶ.345-525ರ ವರೆಗಿನ ಕದಂಬರ ಸಾಮ್ರಾಜ್ಯದಿಂದ ಹಿಡಿದು ಕ್ರಿ.ಶ 1313-1646ರ ವರೆಗಿನ ಕರ್ನಾಟಕ ಸಾಮ್ರಾಜ್ಯ (ವಿಜಯನಗರ ಸಾಮ್ರಾಜ್ಯ) ದವರೆಗೂ ಟಿ ಶರ್ಟ್ ಮೂಲಕ ಬೆಳಕು ಚೆಲ್ಲುವ ಪ್ರಯತ್ನ ವಿಶಿಷ್ಟವಾಗಿದೆ.
ಚಾಲುಕ್ಯರು, ರಾಷ್ಟ್ರಕೂಟರು, ಸೇವಣರು(ಯಾದವರು), ಹೊಯ್ಸಳರು ಮತ್ತು ಕಳಚೂರಿಗಳು, ಕೆಳದಿಯ ನಾಯಕರು ಹಾಗೂ ಮೈಸೂರು ಸಾಮ್ರಾಜ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಒಳಗೊಂಡ ಟಿ ಶರ್ಟ್ ಸಮ್ಮೇಳನದ ಆಕರ್ಷಕ ಬಿಂದು.
ಬೆಂಗಳೂರಿನ ಸಾಪ್ಟವೇರ್ ಎಂಜನೀಯರ್ ಕೆ.ಭುವನೇಶ್ವರ ನೇತೃತ್ವದಲ್ಲಿ ವಿವಿಧ ಕ್ಷೇತ್ರದಲ್ಲಿ ತೊಡಗಿದ ಸುಮಾರು 40 ಜನರನ್ನು ಒಳಗೊಂಡಿದೆ ‘ಕರ್ಣಾಟ ಬಲ’. ಬೆಳಗಾವಿ, ಸಾಗರ, ಬೆಂಗಳೂರು, ಉತ್ತರ ಕನ್ನಡ ಸೇರಿದಂತೆ ನಾಡಿನ ವಿವಿಧ ಭಾಗಗಳ ಉದ್ಯೋಗಿಗಳು ಒಳಗೊಂಡ ಈ ತಂಡವು 2019ರಿಂದ ಕನ್ನಡ ರಾಜ ಮನೆತನಗಳನ್ನು ನಾಡಿಗೆ ಪರಿಚಯಿಸುವ ಕೈಂಕರ್ಯ ಮಾಡುತ್ತಿದೆ.