March 7, 2026
Saturday, March 7, 2026
spot_img

ಗೆಳೆಯನಿಗೆ ಶಾಂತಿ ಪಾಠ ಮಾಡಿದ ಮೋದಿ! ಉಕ್ರೇನ್ ವಿರುದ್ಧದ ಯುದ್ಧ ನಿಲ್ಲಿಸುವ ಸುಳಿವು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ರಾಜಕೀಯದಲ್ಲಿ ಬದಲಾವಣೆಗಳ ನಡುವೆಯೂ ಭಾರತ–ರಷ್ಯಾ ಸ್ನೇಹ ಮತ್ತೊಂದು ಮಹತ್ವದ ಅಧ್ಯಾಯವನ್ನು ಕಂಡಿದೆ. ಎರಡು ದಿನಗಳ ಅಧಿಕೃತ ಭೇಟಿಗಾಗಿ ಭಾರತಕ್ಕೆ ಬಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇಂದು ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ಗೌರವ ವಂದನೆ ಸ್ವೀಕರಿಸಿದ ನಂತರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಹೈದರಾಬಾದ್ ಹೌಸ್‌ನಲ್ಲಿ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾಗವಹಿಸಿದರು.

ಈ ಮಾತುಕತೆಯ ಕೇಂದ್ರಬಿಂದು ಉಕ್ರೇನ್ ಬಿಕ್ಕಟ್ಟು ಹಾಗೂ ಅದರ ಜಾಗತಿಕ ಪರಿಣಾಮಗಳಾಗಿದ್ದವು. ಸಂಭಾಷಣೆಯ ವೇಳೆ ಪ್ರಧಾನಿ ಮೋದಿ, ಬಿಕ್ಕಟ್ಟು ಆರಂಭವಾದಾಗಿನಿಂದಲೂ ಭಾರತ ನಿರಂತರ ಸಂವಾದದ ಮೂಲಕ ಪರಿಹಾರಕ್ಕೆ ಒತ್ತು ನೀಡುತ್ತಿದ್ದುದನ್ನು ಸ್ಮರಿಸಿದರು. ನಂಬಿಕೆ ಮತ್ತು ಸಂವಹನ ಅಂತಾರಾಷ್ಟ್ರೀಯ ಸಂಬಂಧಗಳ ಮುಖ್ಯ ಆಧಾರಗಳಾಗಿವೆ ಎಂದು ಅವರು ಪುಟಿನ್ ಅವರ ಸಮ್ಮುಖದಲ್ಲಿ ಸ್ಪಷ್ಟಪಡಿಸಿದರು.

ಜಗತ್ತು ಮತ್ತೆ ಶಾಂತಿಗೆ ಮರಳಬೇಕು ಮತ್ತು ಯುದ್ಧಕ್ಕಿಂತ ಮಾತುಕತೆಯೇ ಸದೃಢ ಮಾರ್ಗವೆಂದು ಮೋದಿ ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಮಾತನಾಡಿದ ರಷ್ಯಾ ಅಧ್ಯಕ್ಷ ಪುಟಿನ್, ಭಾರತವು ಶಾಂತಿ ಪ್ರಕ್ರಿಯೆಯನ್ನು ಉತ್ತೇಜಿಸುವಲ್ಲಿ ವಹಿಸುತ್ತಿರುವ ಪಾತ್ರವನ್ನು ಪ್ರಶಂಸಿಸಿದರು. ‘ಉಕ್ರೇನ್ ವಿಷಯದಲ್ಲಿ ಶಾಂತಿಯುತ ಪರಿಹಾರ ಕಂಡುಕೊಳ್ಳಲು ನಾವು ಬದ್ಧರಾಗಿದ್ದೇವೆ. ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳು ಈಗ ಸಂವಾದದ ಭಾಗವಾಗಿವೆ,’ ಎಂದು ಅವರು ಹೇಳಿದರು.

ಎರಡು ದೇಶಗಳ ನಾಯಕರು ಪ್ರಾದೇಶಿಕ ಭದ್ರತೆ, ಆರ್ಥಿಕ ಸಹಕಾರ ಮತ್ತು ತಂತ್ರಜ್ಞಾನ ವಿನಿಮಯದ ಕುರಿತೂ ಚರ್ಚೆ ನಡೆಸಿದ್ದು, ಭಾರತ–ರಷ್ಯಾ ಸಂಬಂಧಗಳು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಬಲಪಡೆಯುವ ನಿರೀಕ್ಷೆ ವ್ಯಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !