ಹೊಸದಿಗಂತ ವರದಿ ಕಾಸರಗೋಡು:
ಮಂಜೇಶ್ವರ ತಾಲೂಕಿನ ಮೀಯಪದವು ಬಾಳಿಯೂರು ಎಂಬಲ್ಲಿ ಶುಕ್ರವಾರ ಬೆಳಗ್ಗೆ ಶಾಲಾ ಬಸ್ ಹಾಗೂ ಬೈಕ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್ ನಲ್ಲಿದ್ದ ಮೂರು ಮಂದಿ ವಿದ್ಯಾರ್ಥಿಗಳ ಪೈಕಿ ಇಬ್ಬರು ಸಾವಿಗೀಡಾದ ದಾರುಣ ಘಟನೆ ನಡೆದಿದೆ.
ಮೃತಪಟ್ಟವರನ್ನು ಮೀಯಪದವು ದರ್ಬೆಯ ಹರೀಶ್ ಶೆಟ್ಟಿಯವರ ಪುತ್ರ ಪ್ರೀತೇಶ್ ಶೆಟ್ಟಿ (19) ಮತ್ತು ಬೆಜ್ಜಂಗಳದ ಸುರೇಶ್ ಎಂಬವರ ಪುತ್ರ ಅಭಿಷೇಕ್ (19) ಎಂದು ಗುರುತಿಸಲಾಗಿದೆ. ಇನ್ನೊರ್ವ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದು , ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ವಿದ್ಯಾರ್ಥಿಗಳು ಮೀಯಪದವು ಭಾಗದಿಂದ ಮಂಗಳೂರಿನ ಕಾಲೇಜುಗಳಿಗೆ ತೆರಳುತ್ತಿದ್ದರು. ಶಾಲಾ ಬಸ್ ಮೀಯಪದವು ಭಾಗದಿಂದ ಉಪ್ಪಳ ಖಾಸಗಿ ಶಾಲೆಗೆ ಮಕ್ಕಳನ್ನು ಕರೆದೊಯ್ಯಲು ತೆರಳುತ್ತಿತ್ತು. ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿ ಕೇಸು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.