ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆ ಗುಂಡಿಗಳಿಂದ ಅದೆಷ್ಟೂ ಜನ ಜೀವತೆತ್ತರೂ ಅಧಿಕಾರಿಗಳಿಗೆ ಅದ್ಯಾವ ಪರಿವೆಯೂ ಇಲ್ಲದಂತೆ ವರ್ತಿಸುತ್ತಾರೆ. ಆಕ್ಷಣಕ್ಕೆ ಮಾತ್ರ ಸ್ಪಂದಿಸಿ ತಾತ್ಕಾಲಿಕ ದುರಸ್ತಿ ಮಾಡಿಸುತ್ತಾರೆ. ಒಂದಲ್ಲಾ ಒಂದು ಕಡೆ ಮತ್ತದೇ ಘಟನೆ ಪುನರಾವರ್ತನೆಯಾಗುತ್ತಲೇ ಇರುತ್ತವೆ.
ಆದರೆ, ನಾವು ಹೇಳುತ್ತಿರುವ ಹುಡುಗನ ಕಥೆ ಹಾಗಲ್ಲ ರಸ್ತೆ ಗುಂಡಿಯಲ್ಲಿ ಅಜ್ಜ ಬಿದ್ದು ಗಾಯಗೊಂಡಿದ್ದನ್ನು ಕಂಡ ಮೊಮ್ಮಗ ಬೇರೆಯವರಿಗೆ ಆ ರೀತಿ ಆಗಬಾರದೆಂದು ತಾನೆ ಖುದ್ದು ನಿಂತು ರಸ್ತೆ ಗುಂಡಿಯನ್ನು ಮುಚ್ಚಿ ಮಾನವೀಯತೆ ಮೆರೆದಿದ್ದಾನೆ. ಈ ಪೋರನ ವಯಸ್ಸು ಕೇವಲ ಹದಿಮೂರು ವರ್ಷ ಎಂಟನೇ ತರಗತಿಯಲ್ಲಿ ಓದುತ್ತಿದ್ದಾರೆ. ತಮಿಳುನಾಡಿನ ಪುದುಚೇರಿಯ ವೃದ್ಧರೊಬ್ಬರು ಇತ್ತೀಚೆಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಗುಂಡಿಗೆ ಬಿದ್ದು ಗಾಯಗೊಂಡಿದ್ದರು. ಅಜ್ಜನ ಹಾಗೆ ಬೇರೆ ಯಾರಿಗೂ ತೊಂದರೆಯಾಗದಿರಲಿ ಎಂದು ರಸ್ತೆಯ ಗುಂಡಿಗಳನ್ನು ಅವರೇ ಸ್ವತಃ ಮರಳು, ಮಣ್ಣು, ಸಿಮೆಂಟ್ ಮತ್ತಿತರ ವಸ್ತುಗಳನ್ನು ಸಂಗ್ರಹಿಸಿ ಆ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿದರು.
ಇದನ್ನು ತಿಳಿದ ಸ್ಥಳೀಯರು ಹಾಗೂ ಸಾರ್ವಜನಿಕ ಪ್ರತಿನಿಧಿಗಳು ಮಾಸಿಲಮಣಿ ಅವರನ್ನು ಅಭಿನಂದಿಸಿದರು. ಶಾಲು ಹೊದಿಸಿ ಸನ್ಮಾನಿಸಲಾಯಿತು. ಸ್ಥಳೀಯ ಶಾಸಕ ವೈಯಾಪುರಿ ಮಣಿಕಂದನ್ ಕೂಡ ಬಾಲಕನ ಮನೆಗೆ ತೆರಳಿ ಖುದ್ದು ಅಭಿನಂದಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ಬಾಲಕನ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ ಸರಕಾರ ರಸ್ತೆ ದುರಸ್ತಿ ಮಾಡದಿರುವ ಬಗ್ಗೆ ಟೀಕೆ ವ್ಯಕ್ತವಾಗಿದೆ.