ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮಧ್ಯ ಪ್ರದೇಶದ ಶಾಲೆಗಳಲ್ಲಿ ಭಗವದ್ಗೀತೆ, ರಾಮಾಯಣ, ಮಹಾಭಾರತ ಮತ್ತು ಇತರ ಧಾರ್ಮಿಕ ಪುಸ್ತಕಗಳ ಆಯ್ದ ಭಾಗಗಳನ್ನು ಬೋಧಿಸಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸೋಮವಾರ ಹೇಳಿದ್ದಾರೆ.
ಭೋಪಾಲ್ ನ ಓಲ್ಡ್ ಕ್ಯಾಂಪಿಯನ್ ಮೈದಾನದಲ್ಲಿ ವಿದ್ಯಾಭಾರತಿ ಸಂಸ್ಥೆ ಆಯೋಜಿಸಿದ್ದ ಸುಘೋಷ್ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಚೌಹಾಣ್ , ರಾಮಾಯಣ, ಮಹಾಭಾರತ, ವೇದಗಳು, ಉಪನಿಷತ್ತುಗಳು ಮತ್ತು ಶ್ರೀಮದ್ ಭಗವದ್ಗೀತೆಗಳು ನಮ್ಮ ಅಮೂಲ್ಯವಾದ ಪುಸ್ತಕಗಳಾಗಿವೆ. ಈ ಪುಸ್ತಕಗಳು ಮನುಷ್ಯನನ್ನು ನೈತಿಕವಾಗಿ ಮತ್ತು ಪರಿಪೂರ್ಣರನ್ನಾಗಿ ಮಾಡುವ ಸಾಮರ್ಥ್ಯ ಹೊಂದಿವೆ. ಆದ್ದರಿಂದ ನಮ್ಮ ಧಾರ್ಮಿಕ ಪುಸ್ತಕಗಳ ಬೋಧನೆಯನ್ನು ಸರ್ಕಾರಿ ಶಾಲೆಗಳಲ್ಲಿ ಅಳವಡಿಸಲಾಗುವುದು ಎಂದು ತಿಳಿಸಿದರು.
ಈ ಪವಿತ್ರ ಪುಸ್ತಕಗಳನ್ನು ಶಾಲೆಗಳಲ್ಲಿ ಕಲಿಸುವ ಮೂಲಕ, ನಾವು ನಮ್ಮ ಮಕ್ಕಳನ್ನು ನೈತಿಕ ಮತ್ತು ಪರಿಪೂರ್ಣರನ್ನಾಗಿ ಮಾಡುತ್ತೇವೆ ಎಂದು ಅವರು ಹೇಳಿದರು.
ಶಿಕ್ಷಣವು ಮಾನವನನ್ನು ಮಾನವನನ್ನಾಗಿ ಮಾಡುವ ವಸ್ತುವಾಗಿದೆ. ನೈತಿಕ ಶಿಕ್ಷಣ ಮತ್ತು ಆಧ್ಯಾತ್ಮಿಕ ಶಿಕ್ಷಣ ಅಗತ್ಯ. ಸ್ವಾಮಿ ವಿವೇಕಾನಂದರು ನೈತಿಕ ಶಿಕ್ಷಣ ಅಗತ್ಯ ಎಂದು ಹೇಳಿದ್ದಾರೆ ಮತ್ತು ವಿದ್ಯಾಭಾರತಿ ಸಂಸ್ಥೆಯು ಈ ನೈತಿಕ ಶಿಕ್ಷಣವನ್ನು ನೀಡುತ್ತದೆ ಎಂದು ಮಧ್ಯ ಪ್ರದೇಶ ಸಿಎಂ ತಿಳಿಸಿದರು.