ಹೊಸದಿಗಂತ ವರದಿ ಕಲಬುರಗಿ:
ಬಿಜೆಪಿ ಪಕ್ಷಕ್ಕೆ ಭಯ ಶುರುವಾಗಿದ್ದು, ಅದಕ್ಕಾಗಿಯೇ ಮೇಲಿಂದ ಮೇಲೆ ನರೇಂದ್ರ ಮೋದಿ, ಅಮಿತ್ ಷಾ ಮತ್ತು ಜೆ.ಪಿ.ನಡ್ಡಾರನ್ನು ರಾಜ್ಯಕ್ಕೆ ಕರೆಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶನಿವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಯಲ್ಲಿ ಜನರು ಸ್ವಯಂಪ್ರೇರಿತವಾಗಿ ಭಾಗಿಯಾಗುತ್ತಿದ್ದಾರೆ. ಹೋದ ಕಡೆಗಳಲ್ಲಿ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು,ನಾವೆಲ್ಲರೂ ಜಂಟಿಯಾಗಿ ಪಕ್ಷದ ಪ್ರಜಾಧ್ವನಿ ಯಾತ್ರೆ ನಡೆಸಿಕೊಂಡು ಹೋಗುತ್ತಿದ್ದೇವೆ.ಮೈಸೂರು ಭಾಗದಲ್ಲಿ ಫೆ.3ರಂದು ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆ ನಡೆಯಲಿದೆ ಎಂದರು.
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕಾಯ೯ಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಕಂಡರೆ ಕಾಂಗ್ರೆಸ್ ಗೆ ಭಯ ವಿಚಾರವಾಗಿ ಮಾತನಾಡಿದ ಅವರು, ಭಯ ಶುರುವಾಗಿದ್ದು ಬಿಜೆಪಿ ಪಕ್ಷಕ್ಕೆ. ಹೀಗಾಗಿ ಪದೇ ಪದೇ ಮೋದಿಯವರನ್ನು, ಶಾ ಅವರನ್ನು ಹಾಗೇ ನಡ್ಡಾರನ್ನು ಕರೆಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಭಾಗ್ಯಗಳು ಒಂದು ಚಡ್ಡಿ ಕೊಂಡುಕೊಂಡರೆ ಇನ್ನೊಂದು ಚಡ್ಡಿ ಉಚಿತ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸಾಫ್ಟ್ ಆಗಿ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಬಗ್ಗೆ ನಾನು ಮಾತನಾಡಲು ಆಗುವುದಿಲ್ಲ. ಕುಮಾರಸ್ವಾಮಿ ಬರೀ ಇಂತಹ ಸುಳ್ಳುಗಳನ್ನು ಹೇಳುತ್ತಾರೆ ಎಂದರು.
ಕಲ್ಯಾಣ ಕನಾ೯ಟಕದ ಭಾಗದಲ್ಲಿ ಮತ್ತು ಮುಂಬೈ ಕನಾ೯ಟಕ ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೆ ನೆಲೆ ಇಲ್ಲ ಎಂದು ಹೇಳಿದ ಅವರು,ಕುಮಾರಸ್ವಾಮಿ ಅವರ ಕುರಿತು ಮಾದ್ಯಮಗಳ ಪ್ರಶ್ನೆಗೆ ಸಿದ್ದರಾಮಯ್ಯ ಗರಂ ಆಗಿದ್ದಾರೆ.