ಹೊಸದಿಗಂತ ವರದಿ ಬಾಗಲಕೋಟೆ:
ಅಮೀತ್ ಶಾ, ಮೋದಿ ಟೀಕೆ ಮಾಡಿದರೆ, ದೊಡ್ಡವರಾಗ್ತೀವಿ ಅನ್ನೋ ಭ್ರಮೆಯಲ್ಲಿ ಕಾಂಗ್ರೆಸ್ ಪಕ್ಷದವರು ಇದ್ದಾರೆ ಎಂದು ಬಿಜೆಪಿ ಮುಖಂಡ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ. ಬಾಗಲಕೋಟೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಬಿಜೆಪಿಗರು ರಾಷ್ಟ್ರೀಯ ನಾಯಕರನ್ನು ಕರೆತಂದು ಪ್ರಚಾರ ತಗೊತಿದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ರಾಜ್ಯಕ್ಕೆ ಕರೆತರಲು ಕಾಂಗ್ರೆಸ್ ನಲ್ಲಿ ರಾಷ್ಟ್ರೀಯ ನಾಯಕರು ಯಾರಿದಾರೆ? ಎಂದು ಪ್ರಶ್ನಿಸಿ ರಾಹುಲ್, ಪ್ರಿಯಾಂಕಾ ಗಾಂಧಿ ಬಂದ್ರೆ ಗೆಲ್ಲೋ ಸೀಟು ಗೆಲ್ಲಲ್ಲ,
ಯುಪಿ, ಗುಜರಾತ್ ನಲ್ಲಿ ಎಲ್ಲೆಲ್ಲಿ ಕಾಲಿಟ್ರೋ ಅಲ್ಲೆಲ್ಲ ಡೆಪಾಸಿಟ್ ಕಳೆದುಕೊಂಡರು.
ಹಾಗಾಗಿ ಅವರ ರಾಷ್ಟ್ರೀಯ ನಾಯಕರು ಬರಲ್ಲ, ಅವರ ಮುಖ ನೋಡಿ ಜನ ವೋಟ್ ಕೊಡಲ್ಲ. ವಿಪಕ್ಷ ನಾಯಕ ಎಂಬ ಕಲ್ಪನೆ ಇಲ್ದೇನೆ ಬಾಯಿಗೆ ಬಂದಂಗೆ ಏನೇನು ಪದಗಳನ್ನು ಬಳಸ್ತಿದಾರೆ. ಅವರ ಭಾಷಣ ತೆಗೆದು ಅವರೇ ನೋಡಲಿ ಎಂದು ಟಾಂಗ್ ನೀಡಿದರು. ಸಿದ್ದರಾಮಯ್ಯ, ಡಿಕೆಶಿ ಬಳಸಿದ ಪದಗಳನ್ನು ರಿಪೀಟ್ ಮಾಡಿ ನನ್ನ ಬಾಯಿ ಹೊಲಸು ಮಾಡಿಕೊಳ್ಳಲು ನಾನು ತಯಾರಿಲ್ಲ ಎಂದರು.
ಆ ರೀತಿ ಅಶ್ಲೀಲ ಪದ ಬಳಕೆ ಮಾಡೋದ್ರಿಂದ ಒಂದಿಷ್ಟು ಜನ ಕೇಕೆ ಹೊಡಿಯಬಹುದು, ಆದ್ರೆ ಸಾಮಾನ್ಯ ಜನರು ಕಾಂಗ್ರೆಸ್, ಸಿದ್ದರಾಮಯ್ಯ, ಡಿಕೆಶಿಯನ್ನ ಒಪ್ಪಲ್ಲ. ಬರುವ ದಿನಗಳಲ್ಲಿ ವಿಪಕ್ಷ ಸ್ಥಾನವನ್ನು ಕಾಂಗ್ರೆಸ್ಸಿಗರು ಕಳೆದುಕೊಳ್ತಾರೆ. ನಮಗೂ ಆ ರೀತಿ ಪದಗಳನ್ನು ಬಳಸಲು ಬರುತ್ತೆ, ಆದ್ರೆ ನಾನು ಖಂಡಿತ ಆ ಪದಗಳನ್ನು ಬಳಸಲು ಇಷ್ಟಪಡಲ್ಲ.
ನಿಮ್ಮ ಸರ್ಕಾರ ಇದ್ದಾಗ ಏನೇನು ಮಾಡಿದ್ರಿ ಹೇಳ್ರಿ, ಒಳ್ಳೆಯ ಕೆಲಸ ಮಾಡಿದ್ರೆ ನೀವ್ಯಾಕೆ ಸರ್ಕಾರ ಕಳೆದಿಕೊಳ್ತಿದ್ರಿ? ಎಂದು ಪ್ರಶ್ನೆ ಮಾಡಿದ ಈಶ್ವರಪ್ಪ, ನೀವು ಮಾಡಿದಂತಹ ಸಾಧನೆ ಸರಿಯಿಲ್ಲ ಅಂತಾನೆ ನಿಮ್ಮನ್ನ ಮನೆಗೆ ಕಳುಹಿಸಿದ್ದು. ನಾವು ಇಂತಿಂತಹ ಕೆಲಸ ಮಾಡಿದ್ದೀವಿ ಅಂತಾ ಹೇಳಿ ನಾನು ಒಪ್ತೀನಿ.
ಆದ್ರೆ ಏಕವಚನದಲ್ಲಿ ವ್ಯಕ್ತಿಗತ ಟೀಕೆ ಮಾಡಬೇಡಿ. ಸೈದ್ಧಾಂತಿಕವಾಗಿ, ಅಭಿವೃದ್ಧಿ ಪರವಾಗಿ ಟೀಕೆ ಮಾಡಿ ನಾನು ಒಪ್ಪುತ್ತೇನೆ ಎಂದರು.