ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಖಾದ್ಯ ತಿಂಡಿ ತಯಾರಿಸುವ ಎಣ್ಣೆ ಬಾಣಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಹೊರವಲಯದ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೂರು ಎಂಬಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಪೊಳಲಿಯ ನಿವಾಸಿ ಪುರಂದರ(50)ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಇವರು ಬೇಕರಿಯಲ್ಲಿ ಹಲವು ವರ್ಷದಿಂದ ಕೆಲಸ ಮಾಡುತ್ತಿದ್ದರು. ಕಳೆದ ಎರಡು ದಿನಗಳಿಂದ ಮಾನಸಿಕವಾಗಿ ಬಳಲಿದವರಂತೆ ಕಂಡು ಬರುತ್ತಿದ್ದ ಇವರು, ಗುರುವಾರ ಮಧ್ಯಾಹ್ನ ಕಾರ್ಮಿಕರು ಬೇಕರಿಯಿಂದ ಹೊರಗಡೆ ಇದ್ದಾಗ ಬಾಗಿಲು ಹಾಕಿ ಉರಿಯುತ್ತಿದ್ದ ಎಣ್ಣೆ ಬಾಣಲೆಗೆ ಹಾರಿದ್ದಾರೆ ಎನ್ನಲಾಗಿದೆ.
ಮೈಯೆಲ್ಲ ಸುಟ್ಟ ಗಾಯಗಳೊಂದಿಗೆ ಬೊಬ್ಬಿಡುತ್ತಿದ್ದ ಪುರಂದರ ಅವರನ್ನು ಬೇಕರಿಯ ಇತರ ಕೆಲಸಗಾರರು ಬಾಗಿಲು ಒಡೆದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದರೂ , ಬದುಕುಳಿದಿಲ್ಲ ಎಂದು ಪ್ರಕರಣ ದಾಖಲಿಸಿರುವ ಬಜಪೆ ಪೊಲೀಸರು ತಿಳಿಸಿದ್ದಾರೆ.
ಮೃತರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣಗಳು ತಿಳಿದು ಬಂದಿಲ್ಲ.