ತ್ರಿವೇಣಿ ಗಂಗಾಧರಪ್ಪ:
ದಕ್ಷಿಣ ಭಾರತದ ಕೆಲವು ಭಾಗಗಳನ್ನು ದೀರ್ಘಕಾಲ ಆಳಿದ ರಾಜವಂಶಗಳಲ್ಲಿ ಚೋಳ ವಂಶ ಪ್ರಮುಖ ತಮಿಳು ರಾಜವಂಶವಾಗಿದೆ. ತುಂಗಭದ್ರಾ ನದಿಯ ಇಡೀ ದಕ್ಷಿಣಭಾಗವನ್ನು ಒಂದು ರಾಜ್ಯವನ್ನಾಗಿ ಮಾಡಿ ಸುಮಾರು ಎರಡು ಶತಮಾನಗಳಿಗಿಂತಲೂ ಹೆಚ್ಚು ಕಾಲ ಆಡಳಿತ ನಡೆಸಿದ ಕೀರ್ತೀ ಈ ರಾಜವಂಶಸ್ಥರಿಗೆ ಸಲ್ಲುತ್ತದೆ. ಇತಿಹಾಸದ ಪುಟಗಳನ್ನೊಮ್ಮೆ ತಿರುವಿ ಹಾಕಿದರೆ ಭಾರತದಲ್ಲಿ ಆಳ್ವಿಕೆ ನಡೆಸಿದ ರಾಜಮನೆತನ, ಕಲಾ ಶ್ರೀಮಂತಿಕೆ, ಸಂಸ್ಕೃತಿ-ಸಂಪ್ರದಾಯ, ರಾಜ್ಯದ ಆಡಳಿತ ಎಲ್ಲವೂ ಕುತೂಹಲಕಾರಿ ಹಾಗೇ ಹೆಮ್ಮೆ ಎಂದೆನಿಸುವುದರಲ್ಲಿ ಎರಡು ಮಾತಿಲ್ಲ.
ರಾಜಮನೆತನಗಳ ಬಗ್ಗೆ ಕಣ್ಣಾರೆ ಕಂಡಿಲ್ಲವಾದರೂ ಅನೇಕ ಶಾಸನ, ಲಿಪಿ, ವಾಸ್ತುಶಿಲ್ಪಗಳ ಮೂಲಕ ಕಾಲದ ಮರಳಿನಲ್ಲಿ ತಮ್ಮ ಹೆಜ್ಜೆಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ದಕ್ಷಿಣ ಭಾರತದಲ್ಲಿ ಸುದೀರ್ಘ ಆಡಳಿತ ನಡೆಸಿದ ಚೋಳರು ಕರ್ನಾಟಕ ಸೇರಿದಂತೆ ಹಲವೆಡೆ ತಮಿಳು ಸಂಸ್ಕೃತಿ ಮತ್ತು ಭಾರತೀಯ ಇತಿಹಾಸಕ್ಕೆ ಕೊಟ್ಟ ಕೊಡುಗೆಗಳೂ ಕೂಡ ಪ್ರಮುಖವಾದವು.
ತಂಜಾವೂರಿನ ಬೃಹದೇಶ್ವರ ದೇವಸ್ಥಾನ
ತಂಜೈ ಪೆರಿಯಾ ಕೋವಿಲ್ ಅಥವಾ ಪೆರುವುಡೈಯಾರ್ ಕೋವಿಲ್ ಎಂದೂ ಕರೆಯಲ್ಪಡುವ ಪ್ರಸಿದ್ಧ ಬೃಹದೇಶ್ವರ ದೇವಾಲಯವನ್ನು ಭಾರತದ ಅತ್ಯುತ್ತಮ ವಾಸ್ತುಶಿಲ್ಪದ ಮಾದರಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ತಂಜಾವೂರಿನಲ್ಲಿ ಕಾವೇರಿ ನದಿಯ ದಡದಲ್ಲಿರುವ ದ್ರಾವಿಡ ಶೈಲಿಯ ದೇವಾಲಯವು ಶಿವನಿಗೆ ಸಮರ್ಪಿತವಾದ ಮೊದಲ ದೇವಾಲಯ ಎಂಬ ಖ್ಯಾತಿ ಇದೆ.
ಕ್ರಿ.ಶ 1010 ರಲ್ಲಿ ರಾಜರಾಜ ಚೋಳ ನಿರ್ಮಿಸಿದ ಅತಿ ದೊಡ್ಡ ದೇವಾಲಯ ಎಂದೂ ಕರೆಯಲ್ಪಡುವ ಇದು ಭಾರತದ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿದೆ. ತಮಿಳುನಾಡು ಪ್ರವಾಸೋದ್ಯಮ ಬೆಳೆಯಲು ಈ ದೇವಾಲಯದ ಪಾತ್ರ ಬಹಳಷ್ಟಿದೆ. ಈ ದೇವಾಲಯವು 1000 ವರ್ಷಗಳಷ್ಟು ಹಳೆಯದಾದ , 216 ಅಡಿ ಎತ್ತರವಿದ್ದು, ರಾಜವಂಶದ ಸಂಸ್ಕೃತಿ, ಶೈಲಿ ಮತ್ತು ವೈಭವವನ್ನು ಪ್ರತಿಬಿಂಬಿಸುತ್ತದೆ. ದೇವಾಲಯದಲ್ಲಿರುವ ಶಾಸನಗಳ ಪ್ರಕಾರ, ಇದನ್ನು ಕುಂಜರ ಮಲ್ಲನ್ ರಾಜಾ ರಾಮ ಪೆರುಂತಚ್ಚನ್ ವಿನ್ಯಾಸಗೊಳಿಸಿದ.
ಮತ್ತೊಂದು ಕುತೂಹಲಕಾರಿ ವಿಷಯವೆಂದರೆ ಗೋಪುರದ ನೆರಳು ಎಂದಿಗೂ ನೆಲದ ಮೇಲೆ ಬೀಳದಂತೆ ನಿರ್ಮಿಸಲಾಗಿದೆ.
ಚಿಕ್ಕಬಳ್ಳಾಪುರದ ಭೋಗನಂದೀಶ್ವರ ದೇವಾಲಯ
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗ್ರಾಮದಲ್ಲಿರುವ ಭೋಗನಂದೀಶ್ವರ ದೇವಸ್ಥಾನ 9 ನೇ ಶತಮಾನ ಗಂಗಾ-ಬಾಣ ಶೈಲಿಯಲ್ಲಿ(ಗಂಗಾ-ಚೋಳ) ನಿರ್ಮಿಸಲ್ಪಟ್ಟಿದೆ, ಈ ಆವರಣವು ಎರಡು ದೇವಾಲಯಗಳನ್ನು ಒಳಗೊಂಡಿದೆ. ಇವುಗಳು ದಕ್ಷಿಣದ ವಿಮಾನ ಶೈಲಿಗೆ ಅತ್ಯುತ್ತಮ ಉದಾಹರಣೆಯಾಗಿವೆ. ಇದರಲ್ಲಿ ಮಹಡಿಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ ಮತ್ತು ಇವುಗಳ ಕುಂಬಿಗೋಡೆಯನ್ನು ಆಕೃತಿ-ಶಿಲ್ಪಗಳಿಂದ ಅಲಂಕರಿಸಲಾಗಿದೆ. ನವರಂಗದಲ್ಲಿರುವ ಕಂಬಗಳಲ್ಲಿ ಸೊಗಸಾಗಿ ಕೆತ್ತಿದ ಕೆಲವು ದೇವತೆಗಳನ್ನು ಮತ್ತು ದೇಮಿ-ದೇವರುಗಳನ್ನು ಹೊಂದಿದೆ.
ನಟರಾಜನ ಚಿತ್ರ
ಶಿವ ಅಥವಾ ನಟರಾಜನ ವಿಶ್ವ-ಪ್ರಸಿದ್ಧ ನೃತ್ಯಾಕೃತಿಯು ಮಧ್ಯಕಾಲೀನ ಯುಗದಲ್ಲಿ ದಕ್ಷಿಣ ಭಾರತದಲ್ಲಿ ಚೋಳ ರಾಜವಂಶದ ಆಶ್ರಯದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಗೊಂಡಿತು ಎಂದು ನಂಬಲಾಗಿದೆ.
ಚೋಳ ರಾಜರು ಭಗವಾನ್ ಶಿವನ ನಿಷ್ಠಾವಂತ ಭಕ್ತರಾಗಿದ್ದರು ಮತ್ತು ಅವರ ಹೆಚ್ಚಿನ ದೇವಾಲಯಗಳು ಶಿವನಿಗೆ ಸಮರ್ಪಿತವಾಗಿವೆ. ಅವುಗಳಲ್ಲಿ ಅತ್ಯಂತ ಜನಪ್ರಿಯವಾದದ್ದು ಶಿವನ ನೃತ್ಯ ರೂಪ ಅಥವಾ ಶಿವ ನಟರಾಜ, ಇದು ಅಂತಿಮವಾಗಿ ಚೋಳ ಶಕ್ತಿಯ ಸಂಕೇತವಾಗಿ ಮಾರ್ಪಟ್ಟಿತು. ಈ ಸುಂದರವಾದ ಕಂಚಿನ ಶಿಲ್ಪವು 12 ನೇ ಶತಮಾನದಷ್ಟು ಹಿಂದಿನದು ಮತ್ತು ಪ್ರಸ್ತುತ ಚೋಳ ಕಂಚಿನ ನಡುವೆ ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನದಲ್ಲಿದೆ.
ಗಂಗೈಕೊಂಡಚೋಳಪುರಂ ದೇವಸ್ಥಾನ
ಗಂಗೈಕೊಂಡಚೋಳಪುರಂ ದೇವಸ್ಥಾನವನ್ನು ತಮಿಳುನಾಡಿನ ಅರಿಯಲೂರ್ ಪ್ರದೇಶದಲ್ಲಿ ಕ್ರಿ.ಶ. 1023 ಮತ್ತು 1036 ರ ನಡುವೆರಾಜೇಂದ್ರ ಚೋಳನು ಅವನ ಪೂರ್ವಿಕರ ಉತ್ಕ್ರುಷ್ಟತೆಯನ್ನು ಪ್ರತಿಬಿಂಭಿಸುವ ಇರಾದೆಯಿಂದ ಗಂಗೈಕೊಂದಚೋಳಪುರಂನಲ್ಲಿನ ಗಂಗೈಕೊಂದಚೋಳಿಸ್ವರಂ ದೇವಸ್ಥಾನವನ್ನು ನಿರ್ಮಿಸಿದನು. ಸುಮಾರು 250 ವರ್ಷಗಳ ಕಾಲ ರಾಜಧಾನಿಯಾಗಿ ಸೇವೆ ಸಲ್ಲಿಸಿದ ಗಂಗೈಕೊಂಡ ಚೋಳಪುರಂ ಎಂಬ ಹಳ್ಳಿಯ ಹೆಸರನ್ನು ಈ ದೇವಾಲಯಕ್ಕೆ ಇಡಲಾಗಿದೆ.
ಚೋಳರ ಕಲೆ ಮತ್ತು ವಾಸ್ತುಶಿಲ್ಪದ ಸುಂದರವಾದ ಪ್ರದರ್ಶನವನ್ನು ಪ್ರದರ್ಶಿಸುವ ಕಲ್ಲಿನ ದೇವಾಲಯವು ರಾಜೇಂದ್ರ ಚೋಳನ ಆಳ್ವಿಕೆಯಿಂದಲೂ ರಾಜವಂಶದ ಜೀವಂತ ಇತಿಹಾಸವೆಂದು ಪರಿಗಣಿಸಲಾಗಿದೆ. ಯುನೆಸ್ಕೋ ಇದನ್ನು ಗ್ರೇಟ್ ಲಿವಿಂಗ್ ಚೋಳ ದೇವಸ್ಥಾನಗಳೆಂದು ಸಹ ಕರೆಯಲಾಗಿದೆ.
ಆಂಧ್ರ, ಕರ್ನಾಟಕ ಮತ್ತು ಬಂಗಾಳದಂತಹ ರಾಜ್ಯಗಳಿಂದ ಯುದ್ಧ ಟ್ರೋಫಿಗಳಾಗಿ ತರಲಾದ ಹಲವಾರು ಶಿಲ್ಪಗಳನ್ನು ದೇವಾಲಯದೊಳಗೆ ಸಂರಕ್ಷಿಸಲಾಗಿದೆ. ಅವುಗಳಲ್ಲಿ, ಚಂಡೇಶ ಅನುಗ್ರಹ ಮೂರ್ತಿ ಮತ್ತು ಸರಸ್ವತಿ ದೇವಾಲಯದ ಅತ್ಯಂತ ಸುಂದರವಾದ ಶಿಲ್ಪಗಳಿವೆ.
ಕುಂಭಕೋಣಂನ ಐರಾವತೇಶ್ವರ ದೇವಸ್ಥಾನ
ತಂಜಾವೂರಿನ ಕುಂಭಕೋಣಂನಲ್ಲಿರುವ ಐರಾವತೇಶ್ವರ ದೇವಾಲಯವನ್ನು 12 ನೇ ಶತಮಾನದಲ್ಲಿ ಚೋಳ ಚಕ್ರವರ್ತಿ ರಾಜೇಂದ್ರ II ನಿರ್ಮಿಸಿದನು. ಈ ದೇವಾಲಯವು ಸ್ವರ್ಗದ ರಾಜನಾದ ಇಂದ್ರನ ಬಿಳಿ ಆನೆ ಐರಾವತದ ರೂಪದಲ್ಲಿ ಶಿವನಿಗೆ ಸಮರ್ಪಿತವಾಗಿದೆ. ಪುರಾಣಗಳ ಪ್ರಕಾರ, ಇಂದ್ರನ ಬಿಳಿ ಆನೆಯು(ಐರಾವತ), ದೂರ್ವಾಸ ಋಷಿ ಮತ್ತು ಯಮನ ಶಾಪದಿಂದ ಮುಕ್ತಿ ಪಡೆಯಲು ಇಲ್ಲಿ ಶಿವನನ್ನು ಪೂಜಿಸಿತಂತೆ. ಆದ್ದರಿಂದ ಈ ದೇವಸ್ಥಾನದಲ್ಲಿ ಶಿವನು ಐರಾವತೇಶ್ವರ ಎಂದು ಪೂಜಿಸಲ್ಪಡುತ್ತಾನೆ.
ಇಲ್ಲಿನ ದೊಡ್ಡ ವೈಶಿಷ್ಟ್ಯವೆಂದರೆ ಮೆಟ್ಟಿಲುಗಳು. ದೇವಾಲಯದ ಪ್ರವೇಶ ದ್ವಾರದಲ್ಲಿ ಕಲ್ಲಿನ ಮೆಟ್ಟಿಲುಗಳಿದ್ದು, ಅದರ ಪ್ರತಿ ಹೆಜ್ಜೆಯಲ್ಲೂ ವಿಭಿನ್ನವಾದ ಶಬ್ದ ಹೊರಬರುತ್ತದೆ. ಈ ಮೆಟ್ಟಿಲುಗಳ ಮೂಲಕ ನೀವು ಸಂಗೀತದ ಏಳು ಸ್ವರಗಳನ್ನು ಕೇಳಬಹುದು. ಮೆಟ್ಟಿಲುಗಳ ಮೇಲೆ ನಡೆದರೂ ಸಂಗೀತ ಹೊರಹೊಮ್ಮುತ್ತದೆ.
ಗಂಗೈಕೊಂಡಚೋಳಪುರಂ ದೇವಸ್ಥಾನದಂತೆಯೇ, ಐರಾವತೇಶ್ವರವು ಕಲ್ಲಿನ ಕೆತ್ತನೆಗಳೊಂದಿಗೆ ಕಲೆ ಮತ್ತು ವಾಸ್ತುಶಿಲ್ಪದ ಗ್ಯಾಲರಿಯಾಗಿದೆ. ಬೃಹದೇಶ್ವರ ದೇವಸ್ಥಾನ ಅಥವಾ ಗಂಗೈಕೊಂಡಚೋಳಪುರಂ ದೇವಸ್ಥಾನಕ್ಕೆ ಹೋಲಿಸಿದರೆ ಚಿಕ್ಕದಾಗಿದ್ದರೂ, ಈ ಕಲೆಯಿಂದಾಗಿ ಈ ದೇವಾಲಯವೂ ಬಹಳ ಫೇಮಸ್.