ಹೊಸದಿಗಂತ ವರದಿ ಬೆಳಗಾವಿ:
ಇದೇ ಅಧಿವೇಶನದಲ್ಲಿ ಬೆಳಗಾವಿ ಜಿಲ್ಲೆ ವಿಭಜನೆಯ ಕುರಿತು ಶಾಸಕರ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ಬೃಹತ್ ಜಿಲ್ಲೆಯಾಗಿದ್ದು ಇದನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ವಿಭಜನೆ ಮಾಡುವಂತೆ ಜನತೆ ಹಾಗೂ ಜನಪ್ರತಿನಿಧಿಗಳು ಆಗ್ರಹಿಸುತ್ತ ಬಂದಿದ್ದಾರೆ. ನೆನೆಗುದಿಗೆ ಬಿದ್ದಿರುವ ವಿಭಜನೆ ವಿಚಾರದ ಸಮಾಲೋಚನೆ ಮಾಡಲು ಅಧಿವೇಶನದಲ್ಲಿಯೇ ಮುಖ್ಯಮಂತ್ರಿ ಮನಸ್ಸು ಮಾಡಿದ್ದು ಸಭೆಯ ನಂತರ ಅದರ ಆಗು ಹೋಗುಗಳು ತಿಳಿಯಲಿದೆ ಎಂದರು.
ಕಿತ್ತೂರು ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗಗಳ ಅಭಿವೃದ್ಧಿ ಕುರಿತು ಚರ್ಚೆ ಹೆಚ್ಚಾಗಿ ಆಗಬೇಕಾಗಿದೆ ಎಂದರು. ಸರಕಾರದಲ್ಲಿ ನಾಯಕತ್ವ ಗೊಂದಲ ಇಲ್ಲವೇ ಇಲ್ಲ. ನಮ್ಮಪಕ್ಷದ ವಿಚಾರಗಳನ್ನು ನಮ್ಮದೇ ಪಡಸಾಲೆಯಲ್ಲಿ ಚರ್ಚಿಸಿ ಕೊಳ್ಳುತ್ತೇವೆ ಎಂದರು.
ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳಲ್ಲಿ ಪ್ರತಿಪಕ್ಷಗಳಿಗೆ ಚಿಂತೆ ಬೇಡ. ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿ ಸದ್ಯಕ್ಕೆ ಖಾಲಿ ಇಲ್ಲ. ಸರಕಾರ ಭದ್ರವಾಗಿದೆ, ಉತ್ತಮ ಆಡಳಿತ ನೀಡುತ್ತಿದೆ. ಬಿಜೆಪಿ ಜನರನ್ನು ತಪ್ಪುದಾರಿಗೆ ಎಳೆಯುವುದು ಬೇಡ ಎಂದು ಸತೀಶ ಪ್ರತಿಪಕ್ಷಗಳಿಗೆ ತಿವಿದರು.

