ಹೊಸದಿಗಂತ ವರದಿ ಶಿವಮೊಗ್ಗ :
ಶಿವಮೊಗ್ಗ ಬೆಳ್ಳಿ ಮಂಡಲ, ಯುಗಧರ್ಮ ಜಾನಪದ ಸಮಿತಿ ಹಾಗೂ ಸಿನಿಮೊಗೆ ಚಿತ್ರ ಸಮಾಜಗಳ ಆಶ್ರಯದಲ್ಲಿ ಆಯೋಜಿಸಿದ್ದ ಅಂಬೆಗಾಲು-5: ಕಿರುಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಫೆಬ್ರವರಿ 12 ರಂದು ನಡೆಯಲಿದೆ ಎಂದು ಅಂಬೆಗಾಲು ಕಿರುಚಿತ್ರ ಸ್ಪರ್ಧೆ ಸಂಚಾಲಕ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ಗುರುವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅರುಣ್, ಕಿರುಚಿತ್ರ ಸ್ಪರ್ಧೆಗೆ 40 ಕ್ಕೂ ಹೆಚ್ಚು ಕಿರುಚಿತ್ರಗಳು ಬಂದಿದ್ದವು. ಅದರಲ್ಲಿ 12 ರಿಂದ 15 ಕಿರುಚಿತ್ರಗಳು ಅಂತಿಮ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದವು. ಆ ಚಿತ್ರಗಳನ್ನು ಫೆಬ್ರವರಿ 12 ರಂದು ಸುವರ್ಣ ಸಂಸ್ಕೃತಿ ಭವನದಲ್ಲಿ ಬೆಳಿಗ್ಗೆ 10 ರಿಂದ ಪ್ರದರ್ಶಿಸಲಾಗುವುದು. ಪ್ರತಿ ಕಿರುಚಿತ್ರ 8 ರಿಂದ 10 ನಿಮಿಷ ಅವಧಿಯದ್ದಾಗಿದೆ ಎಂದರು.
ಮಧ್ಯಾಹ್ಮ 12.30 ಕ್ಕೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಅನ್ಲಾಕ್ ರಾಘವ ಚಿತ್ರ ತಂಡ ಈ ವೇಳೆ ಪಾಲ್ಗೊಳ್ಳಲಿದೆ. ಅಲ್ಲದೇ ಚಿತ್ರದ ಟೀಸರ್ ಕೂಡಾ ಬಿಡುಗಡೆಯಾಗಲಿದೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಿ.ಸತ್ಯಪ್ರಕಾಶ್, ಚಲನಚಿತ್ರ ಕಲಾವಿದ ನಟರಾಜ ಭಟ್, ನಿರ್ಮಾಪಕ ಡಿ.ಮಂಜುನಾಥ್, ನಾಯಕ ನಟ ಮಿಲಿಂದ್, ಧರ್ಮ ಕಡೂರು ಆಗಮಿಸಿ ಬಹುಮಾನಗಳನ್ನು ವಿತರಿಸಲಿದ್ದಾರೆ ಎಂದು ತಿಳಿಸಿದರು.