ಮೇಘನಾ ಶೆಟ್ಟಿ, ಶಿವಮೊಗ್ಗ
ಸುಂದರವಾದ ದಿನ, ಬಾಸ್ ರಜ ಕೊಟ್ಟಿದ್ದಾರೆ, ಹೊರಗೆ ಹೋಗಿಬಂದಿದ್ದಾಯ್ತು, ತಿಂದಿದ್ದಾಯ್ತು, ರಾತ್ರಿ ಇನ್ನೇನು ಮಲಗಬೇಕು ಅಂದಾಗ ಇಷ್ಟು ಲೇಟಾಗಿ ಯಾಕೆ ಬಂದ್ರಿ ಅಂತ ಅಪ್ಪ ಕ್ಲಾಸ್ ತಗೊಂಡಿದ್ದಾರೆ! ಸಾಕಲ್ಲ, ದಿನವೇ ಹಾಳಾಯ್ತು ಅಂತ ಕೊರಗೋದಕ್ಕೆ..
ಆಕೆ, ಗಂಡ ಸಂದರವಾದ ಮಗು ರಸ್ತೆಯಲ್ಲಿ ನಡೆದುಹೋಗುತ್ತಿದ್ದಾರೆ. ಆದರೆ ಅವಳ್ಯಾಕೆ ಅಷ್ಟ್ ದಪ್ಪ ಆಗಿದಾಳೆ, ಮಕ್ಕಳಾದ್ಮೇಲೆ ಮುಗಿತು, ಯಾರಿಗೂ ತಮ್ಮ ಬಗ್ಗೆ ಗಮನ ಇಲ್ಲ ಅಂತೆಲ್ಲಾ ಕಮೆಂಟ್ ಹೊಡೆಯೋ ನಿಮಗೆ ಆಕೆ ಕುಟುಂಬದ ಖುಷಿ, ನಗೋ ಸದ್ದು ಕೇಳಲೇ ಇಲ್ಲ!
ಮನೆತುಂಬಾ ನೆಂಟರು, ಮೂವತ್ತು ಜನಕ್ಕೆ ಮನೆಯಲ್ಲೇ ಅಡುಗೆ, ಮಧ್ಯರಾತ್ರಿಯಿಂದಲೇ ತರಕಾರಿ ಹೆಚ್ಚೋಕೆ, ಸೊಪ್ಪು ಬಿಡಿಸೋಕೆ ಹೆಂಗಸರು ಕುಳಿತಿದ್ರು. ಮಧ್ಯಾಹ್ನ 1 ಗಂಟೆಗೆ ಕರೆಕ್ಟಾಗಿ ಊಟ ರೆಡಿ ಇತ್ತು. ಊಟಕ್ಕೆ ಕೂತ ಗಂಡಸರು, ಊಟಕ್ಕೆ ಉಪ್ಪು ಸಾಲದು ಅಂದ್ರು! ಶ್ರಮವೆಲ್ಲಾ ವೇಸ್ಟ್ ಆಗಿ ಹೋಯ್ತು..
ಈ ರೀತಿ ಸಾಕಷ್ಟು ಸನ್ನಿವೇಶಗಳು ನಿಮ್ಮ ಮನೆಯಲ್ಲೂ ಆಗಿರಬಹುದು ಅಲ್ವಾ? ಒಮ್ಮೆ ಯೋಚಿಸಿ ನೋಡಿ, ಎಲ್ಲ ವಿಷಯದಲ್ಲಿಯೂ ಒಳ್ಳೆಯದನ್ನೇ ಹುಡುಕುತ್ತಾ ಹೋಗೋದು ಅಷ್ಟೊಂದು ಕಷ್ಟ ಇಲ್ಲ. ಸಣ್ಣ, ದಪ್ಪ, ಅಂದ, ಚಂದ, ಹಣ, ಒಡವೆ ಇವೆಲ್ಲವನ್ನೂ ಬಿಟ್ಟು ಸೌಂದರ್ಯ ಇದೆ, ಖುಷಿ ಇದೆ, ಸಂತಸ ಇದೆ.
ಎಲ್ಲದರಲ್ಲಿಯೂ ಒಳ್ಳೆಯದನ್ನು ಹುಡುಕೋಕೆ ಟಿಪ್ಸ್ ಇಲ್ಲಿದೆ..
ಧನ್ಯರಾಗಿರಿ, ತಿನ್ನೋ ಅನ್ನಕ್ಕೆ, ಮಾಡೋ ಕೆಲಸಕ್ಕೆ, ದುಡಿಯೋ ಹಣಕ್ಕೆ, ಸುತ್ತಲೂ ಇರೋ ಜನಕ್ಕೆ, ಮನಸ್ಸಿನಲ್ಲಿರೋ ಪ್ರೀತಿಗೆ ಎಲ್ಲದಕ್ಕೂ ಧನ್ಯರಾಗಿರಿ.
ಮೆಡಿಟೇಶನ್ ಉತ್ತಮ ದಾರಿ, ಮೆಡಿಟೇಟ್ ಮಾಡುತ್ತಾ ನಿಮ್ಮ ಗಮನ, ಆಲೋಚನೆಗಳು ಬದಲಾಗುತ್ತವೆ.
ನೀವಷ್ಟೇ ಅಲ್ಲ, ನಿಮ್ಮ ಸುತ್ತಮುತ್ತಲಿನವರೂ ಏನಾದ್ರೂ ಒಳ್ಳೆಯದು ಮಾಡೋಕೆ ಎನ್ಕರೇಜ್ ಮಾಡಿ.
ನಿಮ್ಮನ್ನು ನೀವು ಒಪ್ಪಿಕೊಳ್ಳಿ, ನಿಮ್ಮ ಬಾಹ್ಯ ಸೌಂದರ್ಯ, ಆಂತರಿಕ ಸೌಂದರ್ಯ, ನಿಮ್ಮ ಜೀವನ ಎಲ್ಲವನ್ನೂ ಒಪ್ಪಿಕೊಂಡು ಅಪ್ಪಿಕೊಳ್ಳಿ.
ಪಾಸಿಟಿವ್ ಆದ ಮಾತುಗಳನ್ನು, ಪಾಸಿಟಿವ್ ಆದ ಆಲೋಚನೆಗಳನ್ನು ಮರೆಯಬೇಡಿ, ಪದೆ ಪದೇ ಅದನ್ನೇ ಹೇಳಿಕೊಳ್ಳಿ, ಇದು ಬದಲಾವಣೆ ತರುತ್ತದೆ.
ಓವರ್ ಥಿಂಕಿಂಗ್ ಮಾಡೋದನ್ನು ನಿಲ್ಲಿಸಿ, ಜಾಸ್ತಿ ಯೋಚನೆ ಮಾಡ್ತಾ ಕೆಟ್ಟ ಆಲೋಚನೆಗಳಿಗೆ ಜಾಗ ಸಿಗುತ್ತದೆ.
ನಿಮ್ಮ ಸೋಲ್ನ್ನು ಖುಷಿಯಾಗಿ ಇಟ್ಟುಕೊಳ್ಳಿ, ನಿಮ್ಮ ಬಳಿ ಇರೋದು ಜೀವಿಸ್ತಿರೋ ಪ್ರತಿ ಕ್ಷಣ ಮಾತ್ರ, ನಕ್ಕುಬಿಡಿ, ದ್ವೇಷ ಬಿಡಿ, ಖುಷಿ, ಪ್ರೀತಿ ಹಂಚಿ.