ಹೊಸದಿಗಂತ ವರದಿ ವಿಜಯಪುರ:
21 ವರ್ಷದ ಯುವಕನಿಗೆ ಯಶಸ್ವಿ ಮೂತ್ರಪಿಂಡ (ಕಿಡ್ನಿ) ಕಸಿ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಲೈವ್ ಕಿಡ್ನಿ ಕಸಿ ಮೊಟ್ಟ ಮೊದಲ ಬಾರಿ ವಿಜಯಪುರದಲ್ಲಿ ಮಾಡಲಾಗಿದೆ ಎಂದು ಯಶೋಧಾ ಆಸ್ಪತ್ರೆಯ ಮುಖ್ಯಸ್ಥರು ಡಾ. ರವೀಂದ್ರ ಮದ್ದರಕಿ ಹೇಳಿದರು.
ನಗರದ ಯಶೋಧಾ ಆಸ್ಪತ್ರೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂತ್ರಪಿಂಡ (ಕಿಡ್ನಿ) ಸಮಸ್ಯೆ ಬಳಲುವ ಬಹಳಷ್ಟು ಜನರು ಚಿಕಿತ್ಸೆಗಾಗಿ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ಸೇರಿದಂತೆ ದೂರದ ಊರಿಗೆ ಹೋಗಬೇಕಾಗಿತ್ತು. ಅಲ್ಲದೇ ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತಿತ್ತು. ಕೇವಲ 5 ಲಕ್ಷ ರೂ.ಗಳಲ್ಲಿ ಯಶಸ್ವಿ ಮೂತ್ರಪಿಂಡ ಜೋಡಣೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದರು.
ಕಳೆದ ಸೆಪ್ಟೆಂಬರ್ನಲ್ಲಿ ನಮ್ಮ ಆಸ್ಪತ್ರೆಗೆ ಕಿಡ್ನಿ ಟ್ರಾನ್ಸ್ಫರಂಟ್ ಮಾಡಲು ಅನುಮತಿ ದೊರೆತಿದೆ. ಈವರೆಗೂ ವಿಜಯಪುರದಲ್ಲಿ ಈ ಸೌಲಭ್ಯ ಇರಲಿಲ್ಲ. ಈಗ ಯಶೋಧ ಆಸ್ಪತ್ರೆಯಲ್ಲಿ ಮೂತ್ರಪಿಂಡ ಸಮಸ್ಯೆಗಳಿಗೆ ಸಂಬಂಧಿಸಿದ ಎಲ್ಲ ರೀತಿಯ ಚಿಕಿತ್ಸೆ ದೊರೆಯುತ್ತಿದು, ಅದರಲ್ಲೂ ಬಡವರಿಗೆ ಉಚಿತವಾಗಿ ಹಾಗೂ ಇನ್ನಿತರರಿಗೆ ಸಾಧ್ಯವಾದಷ್ಟು ಕಡಿಮೆ ಬೆಲೆಯಲ್ಲಿ ಚಿಕಿತ್ಸೆ ದೊರೆಯಲಿದೆ. ಯುವಕ ಹಾಗೂ ಅಜ್ಜಿ ಇಬ್ಬರೂ ಆರೋಗ್ಯವಾಗಿದ್ದಾರೆ. ನಮ್ಮ ಆಸ್ಪತ್ರೆಗೆ ಇದೊಂದು ಐತಿಹಾಸಿಕ ಕ್ಷಣ ಎಂದು ಸಂತಸ ಹಂಚಿಕೊಂಡರು.